ಜಿನೇವಾ ಒಪ್ಪಂದ ದಿನಾಚರಣೆ-ನಿಧಿ ಸಂಗ್ರಹಣಾ ಜಾಥಾಕ್ಕೆ ಚಾಲನೆ
ಉಡುಪಿ, ಸೆ.4: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಜಿನೇವಾ ಒಪ್ಪಂದ ದಿನಾಚರಣೆ ಮತ್ತು ನಿಧಿ ಸಂಗ್ರಹಣಾ ಜಾಥಾಕ್ಕೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಂಗಳವಾರ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಈ ನಿಧಿ ಸಂಗ್ರಹಣಾ ಜಾಥಾದಲ್ಲಿ ಸಂಗ್ರಹಿಸುವ ಹಣವನ್ನು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಡೆಯುತ್ತಿ ರುವ ಮಾದಕ ವಸ್ತು ವಿರೋಧಿ ಅಭಿಯಾನಕ್ಕೆ ಬಳಸಿಕೊಳ್ಳಲಾಗುವುದು. ಈ ಮೊತ್ತದಿಂದ ಮಾದಕ ವ್ಯಸನಿಗಳ ಚಿಕಿತ್ಸೆಗೆ ಮತ್ತು ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪ ಡಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬನ್ನಂಜೆ ಟೈಗರ್ ಲಯನ್ಸ್ ಕ್ಲಬ್ ವತಿಯಿಂದ ಅಧ್ಯಕ್ಷೆ ವಿದ್ಯಾಲತಾ ಯು.ಶೆಟ್ಟಿ 6000 ರೂ. ನಿಧಿಯನ್ನು ನೀಡಿದರು. ರೆಡ್ಕ್ರಾಸ್ ರಾಜ್ಯ ಶಾಖೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಉಡುಪಿ ರೆಡ್ ಕ್ರಾಸ್ ಸಭಾಪತಿ ಡಾ.ಉಮೇಶ್ ಪ್ರು, ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಗೌರವ ಖಜಾಂಚಿ ಟಿ.ಚಂದ್ರಶೇಖರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಈ ನಿಧಿ ಸಂಗ್ರಹ ಜಾಥಾದಲ್ಲಿ ಜಿಲ್ಲೆಯ ಕಾರ್ಕಳ, ಶಿರ್ವ, ಉಡುಪಿ ನಗರ ಸೇರಿದಂತೆ ಒಟ್ಟು 20 ಕಾಲೇಜು ಗಳ ಯೂತ್ ರೆಡ್ಕ್ರಾಸ್ ಘಟಕದ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.