ಉಳ್ಳಾಲ ನಗರಸಭೆ ಚುನಾವಣೆ: ಕಾಂಗ್ರೆಸ್ ಸೋಲಿನ ಹಿಂದೆ ಪಕ್ಷೇತರರ ಕಾರುಬಾರು
29 ವಾರ್ಡ್ಗಳಲ್ಲಿ 171 ನೋಟಾ ಮತ ಚಲಾವಣೆ
ಮಂಗಳೂರು, ಸೆ.4: ಉಳ್ಳಾಲ ನಗರಸಭಾ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟಗೊಳ್ಳುತ್ತಿದ್ದಂತೆ ಎಲ್ಲಾ ಪಕ್ಷಗಳು ಮತ್ತು ಪಕ್ಷೇತರರಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಬಿರುಸಿನಿಂದ ನಡೆಯುತ್ತಿದೆ. ಕಾಂಗ್ರೆಸ್ನ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ರ ತವರು ಕ್ಷೇತ್ರವಾದ ಉಳ್ಳಾಲದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ಗೆ ಭಾರೀ ಹಿನ್ನಡೆಯಾಗಿದೆ.
ಕಳೆದ ಬಾರಿ 17 ವಾರ್ಡ್ಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಕನಿಷ್ಠ 20 ವಾರ್ಡ್ಗಳಲ್ಲಿ ಗೆಲ್ಲುವ ನಿರೀಕ್ಷೆ ಹೊಂದಿತ್ತು. ಅಲ್ಲದೆ, ಸ್ವಂತ ಬಲದಲ್ಲಿ ಅಧಿಕಾರದ ಗದ್ದುಗೆಗೆ ಏರುವ ಎಲ್ಲಾ ಸಿದ್ಧತೆಯನ್ನು ಮಾಡಿತ್ತು. ಆದರೆ, ಮತದಾರರು ಬೇರೆಯೇ ತೀರ್ಪು ನೀಡಿದ ಕಾರಣ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಕಾಂಗ್ರೆಸ್ 13, ಬಿಜೆಪಿ 6, ಎಸ್ಡಿಪಿಐ 6, ಜೆಡಿಎಸ್ 4, ಪಕ್ಷೇತರರು ಇಬ್ಬರು ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅನಿವಾರ್ಯವಾಗಿ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಿದೆ. ಇಬ್ಬರು ಪಕ್ಷೇತರರ ಬೆಂಬಲ ಸಿಕ್ಕಿದರೂ ಕೂಡಾ ಬಹುಮತಕ್ಕೆ ಇನ್ನೂ 1 ಸ್ಥಾನ ಬೇಕಿದೆ. ಆದರೆ ಉಳ್ಳಾಲದಲ್ಲಿ ಜೆಡಿಎಸ್ ಏಕಾಏಕಿ 4 ಸ್ಥಾನ ಗೆಲ್ಲಲು ಕಾಂಗ್ರೆಸ್ನಿಂದ ಅಸಮಾಧಾನಗೊಂಡು ಹೊರ ಬಂದವರೇ ಕಾರಣ ಎಂಬುದನ್ನು ಮರೆಯಲಾಗದು. ಇನ್ನು ಇಬ್ಬರು ಪಕ್ಷೇತರರು ಕೂಡಾ ಕಾಂಗ್ರೆಸ್ ಟಿಕಟ್ ಆಕಾಂಕ್ಷಿಗಳೇ ಆಗಿದ್ದರು. ಹಾಗಾಗಿ ಜೆಡಿಎಸ್ ಮತ್ತು ಪಕ್ಷೇತರರು ಕಾಂಗ್ರೆಸ್ಗೆ ಷರತ್ತು ವಿಧಿಸಿದರೆ ಅಚ್ಚರಿ ಇಲ್ಲ.
ಪಕೇತರರ ಕಾರುಬಾರು: ಉಳ್ಳಾಲದಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಗಲು ಜೆಡಿಎಸ್-ಎಸ್ಡಿಪಿಐ ಮಾತ್ರವಲ್ಲ, ಪಕ್ಷೇತರರು ಕೂಡಾ ಕಾರಣರಾಗಿದ್ದಾರೆ. 3ನೆ ವಾರ್ಡ್ನ ಸೇನರಬೈಲ್ ಮತ್ತು 19ನೆ ವಾರ್ಡ್ನ ಬಬ್ಬುಕಟ್ಟೆ ವಾರ್ಡ್ನಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇನ್ನುಳಿದಂತೆ 5ನೇ ವಾರ್ಡ್ನ ಉಳಿಯ ಹೊಯಿಗೆಯಲ್ಲಿ ಪಕ್ಷೇತರ ಅಭ್ಯರ್ಥಿ ಸರಿತಾ ವೇಗಸ್ 417ಮತ ಗಳಿಸಿ ಗಮನ ಸೆಳೆದಿದ್ದಾರೆ. 7ನೇ ವಾರ್ಡ್ನ ಉಳ್ಳಾಲ ಪೇಟೆಯಲ್ಲಿ ಕಾಂಗ್ರೆಸ್ ಸೋಲಿಗೆ ಪಕ್ಷೇತರ ಅಭ್ಯರ್ಥಿ ಶೋಭಾ ಗೋಪಾಲ ಪಡೆದ 347 ಮತಗಳು ಕಾರಣವಾಗಿದೆ. 11ನೇ ವಾರ್ಡ್ನ ಮೇಲಂಗಡಿ ಯಲ್ಲಿ ಕಾಂಗ್ರೆಸ್ ಸೋಲಿಗೆ ಅಥವಾ ಎಸ್ಡಿಪಿಐ ಗೆಲುವಿಗೆ ಪಕ್ಷೇತರ ಅಭ್ಯರ್ಥಿ ಝರೀನಾ ಬೇಗಂ ಪಡೆದ 66 ಮತಗಳೂ ಕಾರಣವಾಗಿದೆ. 14ನೇ ವಾರ್ಡ್ನ ಮಂಚಿಲದಲ್ಲಿ ಕಾಂಗ್ರೆಸ್ನ ಅಯ್ಯೂಬ್ ಮಂಚಿಲ ಗೆಲ್ಲಲು ಅಥವಾ ಜೆಡಿಎಸ್ ರಾಜ್ಯ ನಾಯಕ ಗಂಗಾಧರ ಉಳ್ಳಾಲ ಸೋಲಲು ಪಕ್ಷೇತರ ಅಭ್ಯರ್ಥಿ ಅಬ್ದುಲ್ ಮಕ್ಸೂದ್ ಪಡೆದ 163 ಮತಗಳು ಕಾರಣವಾಗಿದೆ. 16ನೇ ವಾರ್ಡ್ ಕಲ್ಲಾಪು ಕೆರೆಬೈಲ್ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಸಾಧಿಸಲು ಪಕ್ಷೇತರ ಅಭ್ಯರ್ಥಿ ಶಾಕಿರ್ ಅಹ್ಮದ್ ಪಡೆದ 191 ಅಥವಾ ಸಿಪಿಎಂನ ಲಕ್ಷ್ಮಣ ಅಮೀನ್ ಪಡೆದ 43 ಮತಗಳು ಕಾರಣವಾಗಿದೆ.
4ನೇ ವಾರ್ಡ್ ಸೇನೆರೆಬೈಲು 2ರಲ್ಲಿ ಕಾಂಗ್ರೆಸ್ ಸೋಲಿಗೆ ಅಥವಾ ಎಸ್ಡಿಪಿಐ ಗೆಲುವಿಗೆ ಕಾಂಗ್ರೆಸ್ನಿಂದ ಹೊರಬಂದು ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಶ್ರಫ್ ಬಾವ ಕಾರಣರಾಗಿದ್ದಾರೆ.
9ನೆ ವಾರ್ಡ್ನ ಛೋಟಾ ಮಂಗಳೂರು ವಾರ್ಡ್ನಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಗೊಂಡು ಸ್ಪರ್ಧಿಸಿದ್ದ ಮಾಜಿ ಕೌನ್ಸಿಲರ್ ಇಸ್ಮಾಯೀಲ್ ಪೊಡಿಮೋನು ಸೋಲಿಗೆ ಬಿಜೆಪಿ 9ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಪಡೆದ 243 ಮತಗಳೇ ಕಾರಣವಾಗಿದೆ.
29 ವಾರ್ಡ್ಗಳಲ್ಲಿ ನೋಟಾ ಮತ ಚಲಾವಣೆ: ಅಂದಹಾಗೆ ಈ ಬಾರಿ ಒಟ್ಟು 29 ವಾರ್ಡ್ಗಳಲ್ಲಿ 171 ನೋಟಾ ಮತಗಳು ಚಲಾವಣೆಯಾಗಿದೆ. 1 ಮತ್ತು 3ನೆ ವಾರ್ಡ್ನಲ್ಲಿ ನೋಟಾ ಮತ ಚಲಾವಣೆಯಾಗಿಲ್ಲ. ಉಳಿದ ಎಲ್ಲಾ ವಾರ್ಡ್ಗಳಲ್ಲೂ ನೋಟಾ ಮತ ಚಲಾವಣೆಯಾಗಿದೆ. ಅದರಲ್ಲೂ ಎರಡು ವಾರ್ಡ್ಗಳಲ್ಲಿ ಕನಿಷ್ಠ 1 ಮತ್ತು ಒಂದು ವಾರ್ಡ್ನಲ್ಲಿ ಗರಿಷ್ಠ 16 ಮತಗಳು ಚಲಾವಣೆಯಾಗಿದೆ.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಪ್ರಕಟ
ಉಳ್ಳಾಲ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಪ್ರಕಟವಾಗಿದೆ. ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ‘ಎ’ ಮತ್ತು ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ‘ಬಿ’ಗೆ ಮೀಸಲಿಡಲಾಗಿದೆ. ಕಾಂಗ್ರೆಸ್ ಪಕ್ಷವು ಜೆಡಿಎಸ್-ಪಕ್ಷೇತರರ ಬೆಂಬಲ ಪಡೆದು ಅಧಿಕಾರದ ಗದ್ದುಗೆಗೆ ಏರಿದರೆ ಅಧ್ಯಕ್ಷ ಸ್ಥಾನ ಯಾರಿಗೆ ಎಂಬುದು ಪ್ರಮುಖವಾಗಲಿದೆ. ಜೆಡಿಎಸ್ನ ನಾಲ್ವರು ಮತ್ತು ಇಬ್ಬರು ಪಕ್ಷೇತರರೂ ಅಧ್ಯಕ್ಷ ಸ್ಥಾನಕ್ಕೆ ಅರ್ಹತೆ ಪಡೆದಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಇಲ್ಲಿ ಯಾರೂ ಇಲ್ಲ. ಹಾಗಾಗಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವ ಅನಿವಾರ್ಯತೆ ಇದೆ. ಒಂದು ವೇಳೆ ಕಾಂಗ್ರೆಸ್ ಈ ಸೂತ್ರಕ್ಕೆ ಒಪ್ಪಿಕೊಂಡು ಉಪಾಧ್ಯಕ್ಷ ಸ್ಥಾನಕ್ಕೆ ಪಡೆಯುವುದಾದರೆ ಕ್ರೈಸ್ತ ಸಮುದಾಯದ ಬಾಝಿಲ್ ಡಿಸೋಜ ಅಥವಾ ವೀಣಾ ಶಾಂತಿ ಡಿಸೋಜರಿಗೆ ಅವಕಾಶವಿದೆ. ಕಾಂಗ್ರೆಸ್ನಲ್ಲಿ ಬಂಟ ಸಮಾಜದ ಯಾರೂ ಇಲ್ಲ.
ಬಿಜೆಪಿಯಿಂದ ಬಾಹ್ಯ ಬೆಂಬಲ?: ಈ ಮಧ್ಯೆ ಕಾಂಗ್ರೆಸ್ನಿಂದ ಅಧಿಕಾರದಿಂದ ದೂರವಿಡುವ ಸಲುವಾಗಿ ಎಸ್ಡಿಪಿಐ, ಜೆಡಿಎಸ್, ಇಬ್ಬರು ಪಕ್ಷೇತರ ಸಹಿತ 12 ಮಂದಿಯ ಗುಂಪಿಗೆ ಬಿಜೆಪಿ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಾಹ್ಯ ಬೆಂಬಲವನ್ನು ಎಸ್ಡಿಪಿಐ ಪಡೆಯಲು ಸಿದ್ಧವಿದೆಯೇ? ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಸಹಿತ ಜೆಡಿಎಸ್ನ ಹಿರಿಯ ಮುಖಂಡರು ಒಪ್ಪಿಗೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಮಧ್ಯೆ ಎಸ್ಡಿಪಿಐ ಪಕ್ಷದ ಬೆಂಬಲದ ಅಗತ್ಯವಿಲ್ಲ ಎಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ಸಿದ್ಧ ಎಂದೂ ಹೇಳಿರುವುದು ಗಮನಾರ್ಹವಾಗಿದೆ. ಒಟ್ಟಿನಲ್ಲಿ ಉಳ್ಳಾಲ ನಗರಸಭೆಯ ಚುನಾವಣೆಯ ಅತಂತ್ರ ಫಲಿತಾಂಶವು ಕುತೂಹಲಕ್ಕೆ ಕಾರಣವಾಗಿದೆ.