ಫರಂಗಿಪೇಟೆ: ವಿದ್ಯಾರ್ಥಿಗಳಿಗೆ ನಿಲ್ಲಿಸದ ಬಸ್ ಗಳನ್ನು ತಡೆದು ನಿಲ್ಲಿಸಿದ ಸ್ಥಳೀಯರು
ಬಂಟ್ವಾಳ, ಸೆ. 5: ಫರಂಗಿಪೇಟೆಯಲ್ಲಿ ಶಾಲಾ ಮಕ್ಕಳಿಗೆ ಸರಕಾರಿ ಬಸ್ ಗಳನ್ನು ಬೆಳಗ್ಗೆ ಮತ್ತು ಸಂಜೆ ಹೊತ್ತಿಗೆ ನಿಲ್ಲಿಸುವುದಿಲ್ಲ ಎನ್ನುವ ಕಾರಣಕ್ಕೆ ಸ್ಥಳೀಯರು ಬಸ್ ಗಳನ್ನು ನಿಲ್ಲಿಸಿ ವಿದ್ಯಾರ್ಥಿ ಗಳನ್ನು ಬಸ್ ಗೆ ಹತ್ತಿಸಿದ ಘಟನೆ ನಡೆದಿದೆ.
ಸತತವಾಗಿ ಕೆ.ಎಸ್.ಆರ್.ಟಿ.ಸಿ ವಿಭಾಗಕ್ಕೆ ಸಾರ್ವಜನಿಕರು ಮನವಿ ಮಾಡುತ್ತಲೇ ಬಂದಿದ್ದಾರೆ ಆದರೆ ಇಲಾಖೆ ಸೂಕ್ತವಾದ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಸ್ಥಳೀಯರು ಫರಂಗಿಪೇಟೆ ಯಲ್ಲಿ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳನ್ನು ಕರೆಯಿಸಿ ಅವರ ಸಮ್ಮುಖದಲ್ಲಿ ಸರಕಾರಿ ಬಸ್ ಗಳನ್ನು ನಿಲ್ಲಿಸಿ ವಿದ್ಯಾರ್ಥಿಗಳನ್ನು ಹತ್ತಿಸಿದರು. ಪುತ್ತೂರು, ಬೆಳ್ತಂಗಡಿ, ದರ್ಮಸ್ಥಳ, ಬಿಸಿರೋಡ್ ಕಡೆಯಿಂದ ಬರುವ ಬಸ್ಸು ಪ್ರಯಾಣಿಕರಿಂದ ತುಂಬಿ ಫರಂಗಿಪೇಟೆಯಿಂದ ಹತ್ತುವ ಮಹಿಳೆಯರಿಗೆ, ವಿದ್ಯಾರ್ಥಿಗಳು ನೂಕು ನುಗ್ಗಳಿನಿಂದ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ತಿಳಿಸಿದರು.
ಫರಂಗಿಪೇಟೆ ಅತೀ ದೊಡ್ಡ ಪೇಟೆ ಯಾಗಿರುವುದರಿಂದ ಸುಮಾರು 15 ಹಳ್ಳಿಯ ಜನರು ಇದೆ ಸಿಟಿಯನ್ನು ಅವಲಂಬಿಸಿದ್ದಾರೆ. ಈ ಪೇಟೆಗೆ ಬಂದು ಹೋಗುವ ಈ ಪ್ರದೇಶದ ವಿದ್ಯಾರ್ಥಿ ಗಳಿಗೆ ಮಂಗಳೂರು ಕಾಲೇಜಿಗೆ ಹೋಗಲು ಸರಕಾರಿ ಬಸ್ ಅನಿವಾರ್ಯ ವಾಗಿದೆ. ಆದರೆ ಉದ್ದೇಶ ಪೂರ್ವಕವಾಗಿ ಬಸ್ ನಿಲ್ಲಿಸುವುದಿಲ್ಲ ಎನ್ನುವುದು ಸ್ಥಳೀಯರ ಆರೋಪ. ಈ ಸಂದರ್ಭದಲ್ಲಿ ನಿವೃತ ಕೆ.ಎಸ್ ಆರ್.ಟಿ.ಸಿ ನೌಕರರ ಸಂಘದ ಅಧ್ಯಕ್ಷ ಎಪ್ ಅಬ್ದುಲ್ ಖಾದರ್, ಸ್ಥಳೀಯರಾದ ವಿ.ಎಚ್. ಕೆರೀಮ್ ಉಪಸ್ಥಿತರಿದ್ದರು.
ಸ್ಥಳಕ್ಕೆ ಗ್ರಾಮಾಂತರ ಠಾಣೆ ಎಸ್.ಐ.ಪ್ರಸನ್ನ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು.
ಫರಂಗಿಪೇಟೆಯಲ್ಲಿ ಎಲ್ಲಾ ಬಸ್ ನಿಲ್ಲಿಸಬೇಕು ಎಂದು ನಾವು ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕರಿಗೆ ಸೂಚನೆ ನೀಡಿದ್ದೇವೆ, ಈಗಾಗಲೇ ಸಾರ್ವಜನಿಕ ದೂರು ಬಂದ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿಗಳನ್ನು, ತನಿಖಾಧಿಕಾರಿಗಳನ್ನು ಫರಂಗಿಪೇಟೆಯಲ್ಲಿ ಕೆಲವು ದಿನಗಳವರೆಗೆ ನಿಯೋಜಿಸಿದ್ದೇವೆ, ಚಾಲಕರು ನಿಲ್ಲಿಸದೇ ಇದ್ದರೆ ಕ್ರಮ ಕೈಗೊಳ್ಳುತ್ತೇವೆ.
-ಪುತ್ತೂರು ಡಿವಿಷನ್, ಬಿ.ಸಿ.ರೋಡ್ ಡಿಪ್ಪೋ ಮ್ಯಾನೇಜರ್ ಇಸ್ಮಾಯಿಲ್