ನಾನು ಕಾಂಗ್ರೆಸ್ ಸೇರ್ಪಡೆಯಾಗಿಲ್ಲ: ಅಬ್ದುಲ್ ಅಝೀಝ್ ಉಳ್ಳಾಲ ಸ್ಪಷ್ಟನೆ
ಮಂಗಳೂರು, ಸೆ.5: ಕಾಂಗ್ರೆಸ್ ಅಭ್ಯರ್ಥಿಯಾಗಿ ಪರಾಜಿತನಾದ ಫೈರೋಝ್ ಕೋಡಿ ಎಂಬವರು ಬಲವಂತದಿಂದ ತನ್ನನ್ನು ಚಹಾ ಕುಡಿಯಲು ಕರೆದೊಯ್ದು ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ ಜೊತೆ ಒತ್ತಾಯ ಪೂರ್ವಕವಾಗಿ ಫೋಟೋ ತೆಗೆಸಿದ್ದಾರೆ. ಬಳಿಕ ತಾನು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದೇನೆ ಎಂದು ಸಾಮಾಜಿಕ ತಾಣಗಳ ಮೂಲಕ ಅಪಪ್ರಚಾರ ಮಾಡಲಾಗುತ್ತಿದ್ದಾರೆ. ಆದರೆ, ನಾನು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಅಬ್ದುಲ್ ಅಝೀಝ್ ಉಳ್ಳಾಲ ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ತಾನು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವುದಾದರೂ ತನ್ನನ್ನು ಚುನಾಯಿಸಲು ಎಲ್ಲ ರೀತಿಯಲ್ಲಿ ಸಹಕರಿಸಿದ ಯು.ಕೆ. ಖಾಲಿದ್, ಫಾರೂಕ್ ಕೋಡಿ, ತಹಸೀನ್ ತೋಟ, ಮುಹಮ್ಮದ್ ರಫೀಕ್, ಅಬ್ದುಲ್ ರವೂಫ್, ಇಸ್ಮಾಯೀಲ್ ಕೋಡಿ, ಹಬೀಬ್ ಕೋಟೆಪುರ, ಇಬ್ರಾಹೀಂ ತೋಟ, ಅದ್ದಾಕ ಹಾಗೂ ಎಲ್ಲ ಕಾರ್ಯಕರ್ತರ ಜೊತೆ ಚರ್ಚಿಸಿ ಅವರ ಅಭಿಪ್ರಾಯ ಪಡೆದು ನಿರ್ಧಾರ ತೆಗೆದುಕೊಳ್ಳುವುದಾಗಿ ಎಂದು ಅಬ್ದುಲ್ ಅಝೀಝ್ ಉಳ್ಳಾಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.