ಆಳ್ವಾಸ್ ನಲ್ಲಿ ಅತಿಥಿ ಉಪನ್ಯಾಸ: ಮಂಗಳ ಮುಖಿಯವರಿಗೂ ಬದುಕುವ ಹಕ್ಕಿದೆ; ಕಾಜಲ್
ಮೂಡುಬಿದಿರೆ, ಸೆ.5: ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಸಮಾನರಾಗಿ ಬದುಕುವ ಹಕ್ಕನ್ನು ನೀಡಿದೆ. ಅದರಂತೆ ಮಂಗಳ ಮುಖಿಯವರಿಗೂ ಎಲ್ಲರಂತೆ ಸಮಾನರಾಗಿ ಬದುಕುವ ಹಕ್ಕಿದೆ ಎಂದು ರೇಡಿಯೋ ಜಾಕಿ ಕಾಜಲ್ ತಿಳಿಸಿದರು.
ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ವತಿಯಿಂದ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇಂದು ಮಂಗಳಮುಖಿಯರು ತಮ್ಮನ್ನು ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬದುಕು ನಡೆಸುತ್ತಿದ್ದರೂ ಸಮಾಜ ಅವರನ್ನು ನೋಡುವ ದೃಷ್ಠಿ ಬದಲಾಗಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಜಾತಿ, ಭಾಷೆ, ಧರ್ಮದ ಹೆಸರಿನಲ್ಲಿ ಕಚ್ಚಾಡುತ್ತಿರುವ ಜನರ ನಡುವೆ ಮಂಗಳಮುಖಿಯರು ಯಾವುದೇ ಜಾತಿ ಧರ್ಮದ ಭೇದಭಾವವಿಲ್ಲದೆ ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದಾರೆ. ಸಮಾಜ ನಮ್ಮ ವೇಷಭೂಷಣ ಹಾಗೂ ನಡೆ ನುಡಿ ನೋಡಿ ಪ್ರತಿದಿನ ಹೀಯಾಳಿಸಿ ನೋವನ್ನು ನೀಡುತ್ತಿದ್ದರೂ, ಅವುಗಳನ್ನು ಲೆಕ್ಕಿಸದೆ ದೈರ್ಯದಿಂದ ಎದುರಿಸಿ ಜೀವನವನ್ನು ನಡೆಸುತ್ತಿದ್ದೇವೆ ಎಂಬ ಹೆಮ್ಮೆ ನನಗಿದೆ ಎಂದರು.
ಇಂದು ಸರಕಾರವು ಎಲ್ಲಾ ಸಮುದಾಯಕ್ಕೆ ನೀಡುವ ಸೌಲ್ಯಭದಂತೆ ನಮ್ಮ ಸಮದಾಯಕ್ಕೂ ಸರಿಯಾದ ರೀತಿಯಲ್ಲಿ ಅನುದಾನ ಹಾಗೂ ಸಹಕಾರವನ್ನು ನೀಡಿದರೆ ನಾವು ಸಹ ಎಲ್ಲರಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಸಾದ್ಯವಾಗುತ್ತದೆ ಎಂದು ತಿಳಿಸಿದರು
ಈ ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಶುಪಾಲರಾದ ಡಾ ಕುರಿಯನ್, ತೃತೀಯ ಲಿಂಗಿ ನಗ್ಮಾ, ಸ್ನಾತಕೋತ್ತರ ಪತ್ರಿಕೋದ್ಯಮದ ವಿಭಾಗದ ಮುಖ್ಯಸ್ಥರಾದ ಡಾ ಮೌಲ್ಯಜೀವನ್ರಾಂ ಹಾಗೂ ಉಪನ್ಯಾಸಕರಾದ ಸ್ವಾತಿ ಶೆಟ್ಟಿ, ದೇವಿಶ್ರೀ ಶೆಟ್ಟಿ ಉಪಸ್ಥಿತರಿದ್ದರು. ನಿನೆಟ್ ಕಾರ್ಯಕ್ರಮವನ್ನು ನಿರೂಪಿಸಿದರು.