ಪುತ್ತೂರು: ಕ್ಯಾಂಪಸ್ ಫ್ರಂಟ್ ವತಿಯಿಂದ ಪ್ರತಿರೋಧ ದಿನ
ಪುತ್ತೂರು, ಸೆ. 5: ಗೌರಿ ಲಂಕೇಶ್ ಹತ್ಯೆಯಾಗಿ ವರ್ಷವಾಗಿರುವ ಹಿನ್ನಲೆಯಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯಾದ್ಯಂತ `ಪ್ರತಿರೋಧ ದಿನ'ವಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಬುಧವಾರ ಸಂಜೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ತಾಲೂಕು ಘಟಕದ ವತಿಯಿಂದ ಇಲ್ಲಿನ ಗಾಂಧಿ ಕಟ್ಟೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಸವಾದ್ ಕಲ್ಲರ್ಪೆ ಗೌರಿ ಅವರನ್ನು ಸಂಘಪರಿವಾರದ ಸನಾತನ ಸಂಸ್ಥೆಯ ಕಾರ್ಯ ಕರ್ತರು ಹತ್ಯೆ ನಡೆಸಿರುವುದು ಆರೋಪಿಗಳ ಬಂಧನದಿಂದ ಸ್ಪಷ್ಟವಾಗಿದೆ. ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ಈ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಗೌರಿ ಲಂಕೇಶ್ ದೂರವಾದರೂ ಅವರ ವ್ಯಕ್ತಿತ್ವ, ಅವರ ಹೋರಾಟದ ಸ್ಪೂರ್ತಿ ನಮ್ಮಿಂದ ದೂರವಾಗಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯ ಅಂತರಾಳದಲ್ಲಿ ಹುದುಗಿಕೊಂಡಿದೆ ಎಂದು ಹೇಳಿದರು.
ತಾಲೂಕು ಘಟಕದ ಸದಸ್ಯರಾದ ಶಿಯಾಬ್ ಬೀಟಿಗೆ, ಸಂಶೀರ್ ಸವಣೂರುಮ ನಿಝಾಮ್ ಕಲ್ಲರ್ಪೆ, ಅಫ್ರಿದ್ ಕೂರ್ನಡ್ಕ, ಫಾರೂಕ್ ಕಬಕ, ಹಾರಿಸ್, ಬಾತಿಷ್ ಬೀಟಿಗೆ ಹಾಗೂ ಜೂನಿಯರ್ ಕಾಲೇಜು ಯುನಿಟ್ ಅಧ್ಯಕ್ಷ ಶಕೀಲ್, ಫಿಲೋಮಿನಾ ಕಾಲೇಜು ಯುನಿಟ್ ಕಾರ್ಯದರ್ಶಿ ಇಲ್ಯಾಸ್ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕು ಕಾರ್ಯದರ್ಶಿ ರಿಯಾಝ್ ಅಂಕತಡ್ಕ ಕಾರ್ಯಕ್ರಮ ನಿರೂಪಿಸಿದರು.