ಕೀಟನಾಶಕ ಬೆರೆಸಿ ಮದ್ಯಪಾನ : ಯುವಕ ಆತ್ಮಹತ್ಯೆ
ಮೂಡುಬಿದಿರೆ, ಸೆ.6: ಯುವಕನೋರ್ವ ಮದ್ಯಪಾನಕ್ಕೆ ಕೀಟನಾಶಕ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕರಿಂಜೆ ಗ್ರಾಮದ ಮಿತ್ತಪಂಜೊಟ್ಟು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.
ಮಿತ್ತಪಂಜೊಟ್ಟು ನಿವಾಸಿ ಅಶೋಕ್(29)ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯೆಂದು ಗುರುತಿಸಲಾಗಿದೆ. ಈತ ಕೂಲಿ ಕಾರ್ಮಿಕನಾಗಿದ್ದು ತನ್ನ ಮಾವನ ಜತೆ ವಾಸವಾಗಿದ್ದ. ಎಂಟು ವರ್ಷದ ಹಿಂದೆ ಈತನ ಅಪ್ಪ ಅಮ್ಮ ಮೃತಪಟ್ಟಿದ್ದು ಇದೇ ವಿಚಾರದಲ್ಲಿ ಈತ ಆಗಾಗ್ಗೆ ಮಾನಸಿಕವಾಗಿ ನೋವು ತೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿ ಈ ಹಿಂದೊಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ.
ಮನೆಯಿಂದ ಬುಧವಾರ ಸಂಜೆ ಹೊರಹೋದವನು ರಾತ್ರಿ ಮನೆಗೆ ಹಿಂದಿರುಗಲಿಲ್ಲ. ಈತನ ತಮ್ಮ ಹುಡುಕಾಡಿದಾಗ ಮನೆ ಹತ್ತಿರದ ಪಂಪ್ಶೆಡ್ಡ್ ಬಳಿ ಬೈಕ್ ನಿಂತಿದ್ದು ಹತ್ತಿರದಲ್ಲಿ ಚಪ್ಪಲಿಗಳು ಕೂಡ ಇದ್ದವೆನ್ನಲಾಗಿದೆ. ಅನುಮಾನಗೊಂಡು ಪಂಪ್ಶೆಡ್ ಒಳಗೆ ಇಣುಕಿ ನೋಡಿದಾಗ ಅಶೋಕ್ನ ಶವ ಪತ್ತೆಯಾಗಿತ್ತೆನ್ನಲಾಗಿದೆ. ಪೊಲೀಸರ ಉಪಸ್ಥಿತಿಯಲ್ಲಿ ಶೆಡ್ನ ಬಾಗಿಲು ತೆರೆದು ಶವ ಮಹಜರು ನಡೆಸಲಾಯಿತು. ಮದ್ಯಪಾನಕ್ಕೆ ಕೀಟನಾಶಕ ಬೆರೆಸಿ ಅದನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.