ಕೋಟೆಕಾರು: ಹೆದ್ದಾರಿ ದರೋಡೆಕೋರರಿಬ್ಬರ ಬಂಧನ
ಉಳ್ಳಾಲ,ಸೆ.6: ಕೋಟೆಕಾರು ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಾರಕಾಯುಧ ಮತ್ತು ಮೆಣಸಿನ ಹುಡಿ ಹಿಡಿದುಕೊಂಡು ವಾಹನ ಸವಾರರನ್ನು ತಡೆದು ದರೋಡೆಗೆ ಸಂಚು ರೂಪಿಸುತ್ತಿದ್ದ ಇಬ್ಬರನ್ನು ಉಳ್ಳಾಲ ಪೊಲೀಸರು ಗುರುವಾರ ನಸುಕಿನ ಜಾವ ಬಂಧಿಸಿದ್ದಾರೆ. ಇವರ ಜೊತೆಗಿದ್ದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಚೆಂಬುಗುಡ್ಡೆ ನಿವಾಸಿಗಳಾದ ಶಿಹಾಂ (20) ಮತ್ತು ಮಹಮ್ಮದ್ ಅಫ್ರೀದಿ (22) ಎಂದು ಗುರುತಿಸಲಾಗಿದೆ. ಇತರ ಆರೋಪಿಗಳಾದ ಸಲ್ಮಾನ್ ತಾರೀಖ್, ಹಬೀಬ್ ಯಾನೆ ಅಬ್ಬಿ, ಮುತಾಲಿಬ್ ಎಂಬವರು ತಲೆಮರೆಸಿಕೊಂಡಿದ್ದಾರೆ.
ರಾತ್ರಿ ವೇಳೆ ಗಸ್ತು ನಿರತ ಪೊಲೀಸರಿಗೆ ತಂಡವು ಸಿಕ್ಕಿಬಿದ್ದಿತ್ತು. ಇವರ ಕೈಯಲ್ಲಿದ್ದ ಕಬ್ಬಿಣ ರಾಡು, ನೈಲಾನ್ ಹಗ್ಗಗಳು, ಚೂರಿ, ಮೆಣಸಿನ ಹುಡಿ, 2 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಹೆದ್ದಾರಿ ಬದಿಯಲ್ಲಿ ನಿಲ್ಲುವ ಲಾರಿ ಚಾಲಕರನ್ನು, ವಾಹನ ಸವಾರರನ್ನು ತಡೆದು ದರೋಡೆ ನಡೆಸುವ ಸಂಚು ರೂಪಿಸುತ್ತಿದ್ದರು ಎನ್ನಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕರುಗಳಾದ ಗುರವಪ್ಪ ಕಾಂತಿ, ವಿನಾಯಕ ತೋರಗಲ್ ಹಾಗೂ ಸಿಬ್ಬಂದಿಗಳಾದ ಪ್ರಶಾಂತ್, ರಂಜಿತ್ ವಾಸುದೇವ ಭಾಗವಹಿಸಿದ್ದರು.