ಹೆಜಮಾಡಿಯಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ : ಸಚಿವೆ ಡಾ. ಜಯಮಾಲಾ
ಪಡುಬಿದ್ರಿ,ಸೆ.9: ಹೆಜಮಾಡಿಯಲ್ಲಿ ಸ್ಥಳೀಯ ವಾಹನಗಳಿಗೆ ಎಂದಿಗೂ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಹೇಳಿದರು.
ಹೆಜಮಾಡಿಗೆ ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಆಗಮಿಸಿದ ಅವರು ಹೆಜಮಾಡಿ ಒಳ ರಸ್ತೆಯಲ್ಲಿ ನಿರ್ಮಾಣ ಮಾಡಿರುವುದರ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಈ ಭಾಗದಲ್ಲಿ ಕೆಲವೊಂದು ಘನ ವಾಹನಗಳು ಮುಖ್ಯರಸ್ತೆಯಲ್ಲಿ ಸಾಗದೆ ಟೋಲ್ ವಂಚಿಸಿ ಒಳ ರಸ್ತೆಯಲ್ಲಿ ಸಾಗುತ್ತಿದೆ. ಅದನ್ನು ನಿಯಂತ್ರಿಸಲು ಒಳ ರಸ್ತೆಗೆ ಟೋಲ್ ಅಳವಡಿಸಲಾಗಿದೆ. ಇದರಿಂದ ಸ್ಥಳೀಯರಿಗೆ ಯಾವುದೇ ತೊಂದರೆಯಿಲ್ಲ. ಒಂದು ವೇಳೆ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ. ಅವರೊಂದಿಗೆ ನಾನಿದ್ದೇನೆ ಎಂದು ನುಡಿದರು.
ಹೆಜಮಾಡಿ ಮೀನುಗಾರಿಕಾ ಬಂದರಿನ ಪ್ರಗತಿ ಬಗ್ಗೆ ಕೇಳಿದಾಗ ಅದಕ್ಕೆ ನಾನು ನಂತರ ಹೇಳುತ್ತೇನೆ ಎಂದು ಉತ್ತರಿಸದೆ ನುಣುಚಿಕೊಂಡರು.
ಇದೇ ಸಂದರ್ಭದಲ್ಲಿ ಟೋಲ್ಗೇಟ್ನ ಬಳಿ ಗೂಡಂಗಡಿಯಿಟ್ಟು ವ್ಯಾಪಾರ ನಡೆಸುತ್ತಿರುವ ಮಹಿಳೆಯರು ಗೂಡಂಗಡಿ ತೆರವು ಮಾಡದಂತೆ ಸಚಿವರಲ್ಲಿ ಮನವಿ ಮಾಡಿದರು. ಅವರನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸಮ್ಮುಖ ಕರೆದು, ವ್ಯಾಪಾರ ಮಾಡಿ ಕಷ್ಟದಿಂದ ಜೀವನ ಸಾಗಿಸುವ ಇವರಿಗೆ ಬದಲಿ ವ್ಯವಸ್ಥೆ ಕಲ್ಪಿಸಿ. ಯಾವುದೇ ರೀತಿ ತೊಂದರೆ ಮಾಡದಿರಿ ಎಂದು ಸೂಚನೆ ನೀಡಿದರು.