ಪುತ್ತೂರು: ಔಷಧಿ ಎಂದು ಭಾವಿಸಿ ಇಲಿ ಪಾಷಾಣ ಸೇವನೆ; ಯುವಕ ಮೃತ್ಯು
ಪುತ್ತೂರು,ಸೆ.7 : ಪುತ್ತೂರಿನ ರೈಲ್ವೇ ನಿಲ್ದಾಣದಲ್ಲಿ ಸೊಂಟ ನೋವಿನ ಔಷಧಿ ಎಂದು ಭಾವಿಸಿ ಇಲಿ ಪಾಷಾಣ ಸೇವಿಸಿ ಅಸ್ವಸ್ಥನಾಗಿದ್ದ ಬೆಳ್ತಂಗಡಿಯ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಬೆಳ್ತಂಗಡಿ ನಿವಾಸಿ ಕರಿಯಾ ಯಾನೆ ಗಿರಿಯಪ್ಪ ಎಂಬವರ ಪುತ್ರ ಅಕ್ಷತಾನಂದ (23) ಮೃತಪಟ್ಟ ಯುವಕ.
ಸೊಂಟನೋವಿನಿಂದ ಬಳಲುತ್ತಿದ್ದ ಅಕ್ಷತಾನಂದ ಸೊಂಟನೋವಿಗಾಗಿ ಔಷಧಿ ತಂದು ಇಟ್ಟುಕೊಂಡಿದ್ದ. ಕಳೆದ ರವಿವಾರ (ಸೆ.2ರಂದು) ಪುತ್ತೂರಿನ ರೈಲ್ವೇ ನಿಲ್ದಾಣಕ್ಕೆ ಬಂದಿದ್ದ ಆತ ಸೊಂಟನೋವು ಉಲ್ಬಣಿಸಿದ ಹಿನ್ನಲೆಯಲ್ಲಿ ಸೊಂಟನೋವಿನ ಔಷಧಿ ಎಂದು ಭಾವಿಸಿ ತನ್ನ ಬಳಿಯಿದ್ದ ಇಲಿ ಪಾಷಾಣವನ್ನು ಸೇವಿಸಿದ್ದ ಎನ್ನಲಾಗಿದೆ.
ಇಲಿ ಪಾಷಾಣ ಸೇವಿಸಿ ತೀರಾ ಅಸ್ವಸ್ಥನಾಗಿದ್ದ ಆತನನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾನೆ.
ಘಟನೆಯ ಕುರಿತು ಮೃತನ ತಂದೆ ಕರಿಯಾ ಯಾನೆ ಗಿರಿಯಪ್ಪ ಅವರು ನೀಡಿರುವ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.