ಕುಮ್ಕಿ ಹಕ್ಕಿಗಾಗಿ ಕೃಷಿಕರ ಹೋರಾಟ: ಶರ್ಮ
ಬ್ರಹ್ಮಾವರ, ಸೆ.7: ರೈತರೇ ದೇಶದ ಬೆನ್ನೆಲುಬು, ಅವರ ಹಿತರಕ್ಷಣೆಗೆ ತಾನು ಸದಾಬದ್ಧ ಎಂದ ಸರಕಾರವೇ ಇದೀಗ ಕೃಷಿಕರ ಕುಮ್ಕಿ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಹುನ್ನಾರ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ತಮ್ಮ ಈ ಹಕ್ಕನ್ನು ಬಿಟ್ಟುಕೊಡದೆ ಉಳಿಸಿಕೊಳ್ಳಲು ಕೃಷಿಕರೆಲ್ಲ ಸಂಘಟಿತರಾಗಿ ಪ್ರಯತ್ನಿಸಬೇಕಾಗಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃ ಷ್ಣ ಶರ್ಮ ಬಂಟಕಲ್ಲು ಹೇಳಿದ್ದಾರೆ.
ಕೃಷಿಕ ಸಂಘ ಬ್ರಹ್ಮಾವರ ವಲಯ ಸಮಿತಿ, ಕುಂಜಾಲು ಮುಂಡ್ಕಿನಜಡ್ಡು ಶಾಲಾ ವಠಾರದಲ್ಲಿ ಆಯೋಜಿಸಿದ್ದ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಉಡುಪಿ ಜಿಲ್ಲಾ ಕೃಷಿಕ ಸಂಘವು ಜನಪ್ರತಿನಿಧಿಗಳಿಗೆ, ಜಿಲ್ಲಾಧಿಕಾರಿಗೆ ಈ ವಿಷಯವನ್ನು ಮನವರಿಕೆ ಮಾಡಿಕೊಡಲಿದೆ. ಅಲ್ಲದೇ ಅದು ಕಾನೂನು ಹೋರಾಟಕ್ಕೂ ಸಿದ್ಧವಿದೆ ಎಂದರು.
ಕಡಿಮೆ ವೆಚ್ಚದಲ್ಲಿ ವೈಜ್ಞಾನಿಕ - ಲಾಭದಾಯಕ ಕೃಷಿ ಮಾಡುವ ಹಾಗು ಕೃಷಿ ಮಾಹಿತಿ ಸಭೆಗಳ ಮಹತ್ವದ ಬಗ್ಗೆ ಸಾಧನಶೀಲ ಕೃಷಿಕ ಪ್ರಶಸ್ತಿ ವಿಜೇತ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಮಾಹಿತಿ ನೀಡಿದರು. ಜಿಲ್ಲಾ ಕೃಷಿಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಮಾತನಾಡಿದರು.
ಸಭೆಯಲ್ಲಿ ಬ್ರಹ್ಮಾವರ ವಲಯದ ಕೃಷಿಕರಾದ ಕುಂಜಾಲು ಭೋಜ ಶೆಟ್ಟಿ, ಕುಶಲ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ನರಸಿಂಹ ಭಟ್, ಹರಿದಾಸ ಉಡುಪ ಮಟಪಾಡಿ, ಆರೂರು ಚಂದ್ರಶೇಖರ ರಾವ್, ಸಂಜೀವ ಶೆಟ್ಟಿ ಕುರ್ಕಾಲು, ರಮಾನಾಥ ಪಾಟ್ಕರ್ ಬಂಟಕಲ್ಲು ಮೊದಲಾದವರು ಉಪಸ್ಥಿತರಿದ್ದರು.