ಹೆಬ್ರಿಯಲ್ಲಿ ಚೆನ್ನಪಟ್ಟಣ ಕಾರು ಚಾಲಕನ ಕೊಲೆ: ದೂರು
ಹೆಬ್ರಿ, ಸೆ.7: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ದೊರೆತ ಅಪರಿಚಿತ ವ್ಯಕ್ತಿಯ ಮೃತದೇಹದ ಗುರುತು ಪತ್ತೆಯಾಗಿದ್ದು, ಮೃತರ ಮನೆಯವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಮೃತರನ್ನು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೂಡ್ಲುರು ಗ್ರಾಮದ ನಾಗರಾಜು ಎಂದು ಗುರುತಿಸಲಾಗಿದೆ. ಇವರು ನಾಪತ್ತೆಯಾಗಿರುವ ಬಗ್ಗೆ ಮೃತರ ಸಹೋದರ ಲೋಹಿತ್ ನೀಡಿದ ದೂರಿನಂತೆ ಆ.30ರಂದು ಚೆನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಇದೀಗ ಮಾಹಿತಿ ತಿಳಿದು ಸೆ.7ರಂದು ಉಡುಪಿಗೆ ಆಗಮಿಸಿದ ಲೋಹಿತ್, ಮೃತದೇಹದ ಭಾವಚಿತ್ರ ಮತ್ತು ಮೃತದೇಹದ ಮೇಲಿದ್ದ ವಸ್ತುಗಳನ್ನು ನೋಡಿ ನಾಗರಾಜು ಗುರುತು ಪತ್ತೆ ಹಚ್ಚಿದ್ದಾರೆ. ನಾಗರಾಜು ಚೆನ್ನಪಟ್ಟಣ ಬಸ್ ನಿಲ್ದಾಣದ ಬಳಿ ಸ್ವಂತ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬಾಡಿಗೆ ನಡೆಸುತ್ತಿದ್ದರು.
ಆ.27ರಂದು ಸಂಜೆ 4ಗಂಟೆಗೆ ಚೆನ್ನಪಟ್ಟಣ ಕಾರ್ ನಿಲ್ದಾಣಕ್ಕೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ನಾಗರಾಜ್ ಕಾರನ್ನು ಬಾಡಿಗೆಗೆ ಕರೆದುಕೊಂಡು ಹೋಗಿದ್ದನು. ಈ ಸಂದರ್ಭ ಅಪರಿಚಿತ ವ್ಯಕ್ತಿ ನಾಗರಾಜುರನ್ನು ಆಯುಧದಿಂದ ಹೊಡೆದು ಕೊಲೆ ಮಾಡಿ, ಗುರುತು ಸಿಗದಂತೆ ಸಾಕ್ಷಿನಾಶ ಮಾಡುವ ಉದ್ದೇಶದಿಂದ ಮೃತದೇಹವನ್ನು ಹೆಬ್ರಿ ಠಾಣಾ ವ್ಯಾಪ್ತಿಯ ಬ್ರಹ್ಮಾವರ ರಸ್ತೆಯ ಸಮೀಪದ ಪೊದೆಯಲ್ಲಿ ಎಸೆದು ಹೋಗಿರುವುದಾಗಿ ದೂರಲಾಗಿದೆ.