ಉಡುಪಿ ನಾಗರಿಕ ಸಮಿತಿಯಿಂದ 'ತೆನೆ ಹಬ್ಬದ ಜೊತೆ ಹಸಿರು ಹಬ್ಬ' ಆಚರಣೆ
ಉಡುಪಿ, ಸೆ.8: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಆಯೋಜನೆಯಲ್ಲಿ ನಗರದ ಶೋಕಮಾತೆ ಚರ್ಚಿನ ಆಶ್ರಯದಲ್ಲಿ 'ತೆನೆ ಹಬ್ಬದ ಜೊತೆ... ಹಸಿರು ಹಬ್ಬ' ಎನ್ನುವ ವಿನೂತನ ಕಾರ್ಯಕ್ರಮವು ಮೊಂತಿ ಫೆಸ್ಟ್ ದಿನ ನಡೆಯಿತು.
ಚರ್ಚಿನಲ್ಲಿ ತೆನೆಹಬ್ಬದ ವಿಧಾನಗಳು ನಡೆದ ಬಳಿಕ, ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರಿಗೆ ಚರ್ಚಿನ ಧರ್ಮಗುರು ಫಾ.ವಲೇರಿಯನ್ ಮೆಂಡೋನ್ಸ ತೆನೆಗುಚ್ಚ ನೀಡುವ ಮೂಲಕ 'ಹಸಿರುಹಬ್ಬ' ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆ ಬಳಿಕ ನಾಗರಿಕ ಸಮಿತಿಯ ವತಿಯಿಂದ ನೆರಳೆ, ನೆಲ್ಲಿ, ಕೊಕಂ, ಕಹಿಬೇವು, ಮೊದಲಾದ 200 ಗಿಡಗಳನ್ನು ಉಚಿತವಾಗಿ ಸ್ಥಳದಲ್ಲಿ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆ ಸಹಕಾರ ನೀಡಿತು.
ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮಗುರುಗಳಾದ ಫಾ.ವಲೇರಿಯನ್ ಮೆಂಡೋನ್ಸ, ಫಾ.ವಿಜಯ್ ಡಿಸೋಜ, ಚರ್ಚಿನ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಅಲ್ಫೋನ್ಸ ಡಿಕೋಸ್ತ, ಮೈಕಲ್ ಡಿಸೋಜ, ಇರ್ವಿನ್ ಆಳ್ವ, ಗ್ರೇಶನ್ ಬೊತೆಲ್ಲೋ ಮತ್ತಿತರರು ಉಪಸ್ಥಿತರಿದ್ದರು.
Next Story