ಸೆ.10ರ ಬಂದ್ಗೆ ವಿವಿಧ ಸಂಘಟನೆಗಳ ಬೆಂಬಲ; ಬಸ್ ಸಂಚಾರ ಸ್ಥಗಿತ?
ಮಂಗಳೂರು, ಸೆ. 8: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ಏರಿಕೆಯನ್ನು ಖಂಡಿಸಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಸೆ. 10ರಂದು ದೇಶಾದ್ಯಂತ ಬಂದ್ ನಡೆಸುವಂತೆ ನೀಡಲಾದ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ದ.ಕ.ಜಿಲ್ಲೆಯಲ್ಲಿ ಈಗಾಗಲೆ ವಿವಿಧ ಕಾರ್ಮಿಕ ಸಂಘಟನೆಗಳು ಶಕ್ತಿ ಪ್ರದರ್ಶನ, ಜಾಥಾ ನಡೆಸಿದ್ದು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ. ಈ ಮಧ್ಯೆ ದ.ಕ. ಜಿಲ್ಲಾ ಬಸ್ ಮಾಲಕರ ಸಂಘ ಹಾಗೂ ಕೆನರಾ ಬಸ್ ಮಾಲಕರ ಸಂಘವು ಶನಿವಾರ ಪ್ರತ್ಯೇಕ ಸಭೆ ನಡೆಸಿ ಬಂದ್ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದೆ. ಹಾಗಾಗಿ ದ.ಕ.ಜಿಲ್ಲೆಯ ಜೀವನಾಡಿಯಂತಿರುವ ಖಾಸಗಿ ಬಸ್ಗಳು ಸಂಚಾರ ಸ್ಥಗಿತಗೊಳಿಸಿದರೆ ಜಿಲ್ಲೆಯಲ್ಲಿ ಬಂದ್ ಯಶಸ್ವಿಯಾಗುವ ಸಾಧ್ಯತೆ ಇದೆ.
ಸಂಚಾರಕ್ಕೆ ಅಡ್ಡಿಯಾದರೆ ಬಸ್ ಸೇವೆ ಸ್ಥಗಿತಗೊಳಿಸಲು ಶನಿವಾರ ಮಂಗಳೂರಲ್ಲಿ ನಡೆದ ಬಸ್ ಮಾಲಕರ ಸಂಘದ ಸಭೆಯು ನಿರ್ಣಯ ಕೈಗೊಂಡಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡನೀಯ. ಮಿತಿಮೀರಿದ ಏರಿಕೆಯಿಂದ ಬಸ್ಗಳ ಸಂಚಾರ ಅಸಾಧ್ಯವಾಗಿದೆ. ಬಸ್ ಮಾಲಕರು ನಷ್ಟದಲ್ಲಿ ಸಂಚಾರ ನಡೆಸುವಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆಗಾಗ ಡೀಸೆಲ್ ಬೆಲೆ ಏರಿಕೆಯಾದರೆ ಸಾರಿಗೆ ವ್ಯವಸ್ಥೆ ನಿರ್ವಹಣೆ ಸಾಧ್ಯವಿಲ್ಲ. ಹಾಗಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಬಸ್ ಮಾಲಕರು ಆಗ್ರಹಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವ ಮತ್ತು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಈಗಾಗಲೆ ನಗರಾದ್ಯಂತ ಜನಜಾಗೃತಿ ಜಾಥಾ ನಡೆಸಲಾಗಿದೆ. ಮಾಜಿ ಸಚಿವ ರಮಾನಾಥ ರೈ ಕೂಡಾ ಬಂದ್ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ನ ಬಂದ್ ಕರೆಗೆ ಎಡಪಕ್ಷಗಳೂ ಬೆಂಬಲ ನೀಡಿದ್ದು, ಸೆ.10ರಂದು ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದೆ. ತನ್ಮಧ್ಯೆ ಕೆಲವು ರಿಕ್ಷಾ ಸಂಘಟನೆಗಳು ಕೂಡಾ ಬಂದ್ಗೆ ಬೆಂಬಲ ಘೋಷಿಸಿವೆ.