ಮುಲ್ಕಿ ತಾಲೂಕು ರಚನೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ
ಮುಲ್ಕಿ, ಸೆ. 9: ಸರಕಾರಿ ಕಾರ್ಯಕ್ರಮದ ನಿಮಿತ್ತ ದ.ಕ. ಹಾಗು ಉಡುಪಿ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಾಷ್ಟ್ರೀಯ ಹೆದ್ದಾರಿ 66 ಮುಲ್ಕಿಯ ಬಪ್ಪನಾಡು ಬಳಿ ಮುಲ್ಕಿ ವಲಯ ಸಮಿತಿಯು ಸ್ವಾಗತಿಸಿ ಮನವಿ ಸಲ್ಲಿಸಿತು.
ಕಳೆದ ವರ್ಷ ಮುಲ್ಕಿ ಬಪ್ಪನಾಡು ದೇವಸ್ಥಾನಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಅವರಿಗೆ ಜೆಡಿಎಸ್ ಮುಲ್ಕಿ ನಾಗರಿಕ ಸಮಿತಿ ಮುಲ್ಕಿ ಯನ್ನು ತಾಲೂಕು ಘೋಷಣೆ ಮಾಡಬೇಕೆಂದು ಬೇಡಿಕೆ ಸಲ್ಲಿಸಿತು. ಬೇಡಿಕೆಗೆ ಸ್ಪಂದಿಸಿ, ರಾಜ್ಯದ ಮುಖ್ಯಮಂತ್ರಿಯಾದರೆ ಮೂರು ತಿಂಗಳೊಳಗೆ ಮುಲ್ಕಿ ತಾಲೂಕು ಘೋಷಣೆ ಮಾಡುವುದಾಗಿ ಆ ಸಂದರ್ಭದಲ್ಲಿ ಭರವಸೆಯನ್ನು ನೀಡಿದ್ದರು.
ರಾಜ್ಯ ಪ್ರ. ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ಮುಲ್ಕಿ ನೇತೃತ್ವದ ಜೆಡಿಎಸ್ ಮುಲ್ಕಿ ವಲಯ ಸಮಿತಿ ಮುಖ್ಯಮಂತ್ರಿಯವರೊಡನೆ ಅವರು ಹಿಂದೆ ಕೊಟ್ಟ ಭರವಸೆಯನ್ನು ಪ್ರಸ್ತಾವಿಸುತ್ತ ಮುಲ್ಕಿ ತಾಲೂಕು ಘೋಷಣೆ ಮಾಡಬೇಕೆಂದು ಆಗ್ರಹಿಸಿತು.
ಮುಲ್ಕಿ ತಾಲೂಕು ರಚನೆ ಮನವಿಯನ್ನು ಪರಿಶೀಲಿಸುವುದಾಗಿ ಈ ಸಂದರ್ಭ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು. ನಿಯೋಗದಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಝ್ ಎಚ್. ಕಾರ್ನಾಡ್, ಜೆಡಿಎಸ್ ಮುಖಂಡರಾದ ಮಾಜಿ ಪ.ಪಂ.ಅಧ್ಯಕ್ಷ ಶಶಿಕಾಂತ್ ಶೆಟ್ಟಿ, ಜಿಲ್ಲಾ ಆ.ಸ.ಉಪಾಧ್ಯಕ್ಷ ನಿಸಾರ್ ಅಹ್ಮದ್, ವಲಯಾಧ್ಯಕ್ಷ ಜೀವನ್ ಶೆಟ್ಟಿ, ಕಾರ್ಯದರ್ಶಿ ನವೀನ್ ಪುತ್ರನ್, ನೂರುಲ್ಲಾ ಶೇಕ್, ಶರಣಪ್ಪ, ಅಲ್ವಿನ್ ಚಿತ್ರಾಪು, ಮನ್ಸೂರು ಕೊಳ್ನಾಡ್, ಮೆಲ್ವಿನ್ ಪಿಂಟೋ, ಸಂಗಪ್ಪ, ಉದಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಜೆಡಿಎಸ್ ಮುಖಂಡ ಹಾಗು ಮೀನುಗಾರರ ಸಂಘದ ಹರೀಶ್ ಪುತ್ರನ್ ಮೀನುಗಾರರ ವಿವಿಧ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.