ನಂದರಬೆಟ್ಟು ರಸ್ತೆಯಲ್ಲಿ ತ್ಯಾಜ್ಯ ರಾಶಿ: ತೆರವಿಗೆ ಮನವಿ
ಬಂಟ್ವಾಳ, ಸೆ. 9: ಬಂಟ್ವಾಳ ಪುರಸಭಾ ವ್ಯಾಪ್ತಿಗೊಳಪಟ್ಟ ನಂದರಬೆಟ್ಟುವಿನ ರಸ್ತೆಯಲ್ಲಿ ತ್ಯಾಜ್ಯ ವಸ್ತುಗಳ ರಾಶಿ ಕಂಡು ಬಂದಿದ್ದು, ತಕ್ಷಣ ಇವುಗಳನ್ನು ಪುರಸಭಾ ಆಡಳಿತ ತೆರವುಗೊಳಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಅನಿವಾಸಿ ಭಾರತೀಯ ಎನ್.ಎಂ.ಹನೀಫ್ ನಂದರಬೆಟ್ಟು (ಬಹರೈನ್) ಮನವಿ ಮಾಡಿದ್ದಾರೆ.
ಪುರಸಭಾ ವತಿಯಿಂದ ಒಣ ತ್ಯಾಜ್ಯ ಮತ್ತು ಹಸಿ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಾ ಮನೆಗೂ ತೆರಳಿ ಅವುಗಳನ್ನು ಕೊಂಡೊಯ್ಯಲು ವಾಹನವೂ ಬರುತ್ತದೆ. ಆದರೆ ಕೆಲವರು ತ್ಯಾಜ್ಯವನ್ನು ಪುರಸಭೆಯಿಂದ ಮನೆಗೆ ಆಗಮಿಸುವ ಕಾರ್ಮಿಕರ ಬಳಿ ನೀಡದೆ ರಸ್ತೆಯ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ವಿದ್ಯಾವಂತರೇ ಹೆಚ್ವಾಗಿರುವ ಈ ಪರಿಸರದಲ್ಲಿ ಈ ರೀತಿ ತ್ಯಾಜ್ಯವನ್ನು ಎಸೆಯುತ್ತಿರುವುದು ಖಂಡನೀಯ. ಈ ರಸ್ತೆಯಾಗಿಯೇ ಮಕ್ಕಳು ಶಾಲೆ-ಕಾಲೇಜು-ಮದ್ರಸಗಳಿಗೆ ತೆರಳುತ್ತಿದ್ದಾರೆ. ಈ ರಸ್ತೆಯ ಮೂಲಕ ಚಲಿಸುವಾಗ ಮೂಗು ಮುಚ್ಚಿ ನಡೆಯುವಂತಹ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ ತ್ಯಾಜ್ಯದಿಂದ ಇಲಿ ಜ್ವರ, ಡೆಂಗ್, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆಯೂ ಇದೆ. ಆದ್ದರಿಂದ ಸ್ಥಳೀಯರು ತ್ಯಾಜ್ಯವನ್ನು ಪುರಸಭೆಯ ವಾಹನ ಸಿಬ್ಬಂದಿ ವರ್ಗಕ್ಕೆ ನೀಡಲು ಮನವಿ ಮಾಡಿದ್ದಾರೆ. ಅಲ್ಲದೆ, ತ್ಯಾಜ್ಯ ಎಸೆಯುವವರ ವಿರುದ್ಧ ಪುರಸಭೆಯು ಕಠಿಣ ಕ್ರಮಕೈಗೊಳ್ಳಲು ವಿನಂತಿಸಿದ್ದಾರೆ.