ಜೀವ ವಿಮಾ ಪ್ರತಿನಿಧಿಗಳಿಂದ ವಿಮಾ ಸಪ್ತಾಹ ಬಹಿಷ್ಕಾರ
ಭಟ್ಕಳ, ಸೆ. 9: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ವಿಮಾ ಸಪ್ತಾಹವನ್ನು ಬಹಿಷ್ಕರಿಸಿ ಜೀವ ವಿಮಾ ಪ್ರತಿನಿಧಿಗಳು ಇಲ್ಲಿನ ಸೆಟಲೈಟ್ ಶಾಖೆಯ ಎದುರು ಪ್ರತಿಭಟನೆ ನಡೆಸಿ ಶಾಖಾ ವ್ಯವಸ್ಥಾಪಕರ ಮೂಲಕ ಧಾರವಾಡದ ಹಿರಿಯ ವಿಭಾಗೀಯ ಪ್ರಬಂಧಕರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಗ್ರಾಹಕರ, ಪ್ರತಿನಿಧಿಗಳ ಹಾಗೂ ಜೀವ ವಿಮಾ ಸಂಸ್ಥೆಯ ಭವಿಷ್ಯದ ದೃಷ್ಠಿಯಿಂದ ಲೈಪ್ ಇನ್ಸುರೆನ್ಸ ಏಜೆಂಟ್ಸ ಫೆಡರೇಶನ್ ಆಪ್ ಇಂಡಿಯಾದಿಂದ ಹೋರಾಟ ನಡೆಯುತ್ತಿದ್ದು, ಮಾರುಕಟ್ಟೆ ತಜ್ಞರು, ಜೀವ ವಿಮಾನಿಯಂತ್ರಣ ಪ್ರಾಧಿಕಾರ ನೀಡಿದ ಸೂಚನೆಯಂತೆ ಆಡಳಿತಾತ್ಮಕ ಖರ್ಚು ಕಡಿಮೆ ಮಾಡಿ ಮಾರಾಟ ಕ್ಷೇತ್ರದಲ್ಲಿ ದುಡಿಯುವವರಿಗೆ ಉತ್ತೇಜನ ನೀಡಬೇಕೆಂದು ಜೀವ ವಿಮಾಪ್ರತಿನಿಧಿಗಳ ಒಕ್ಕೂಟ ಒತ್ತಾಯಿಸುತ್ತಿದೆ. ಜೀವ ವಿಮಾ ಕ್ಷೇತ್ರದಲ್ಲಿ ದುಡಿಯುವ ಪ್ರತಿನಿಧಿಗಳಿಗೆ ನೀಡುವ ಕಮಿಶನ ಕಳೆದ 50 ವರ್ಷಗಳಿಂದಲೂ ಪರಿಷ್ಕರಣೆ ಆಗದೇ ಉಳಿದಿದ್ದು ಅದನ್ನು ಇನ್ನು ಕಡಿತಗೊಳಿಸುತ್ತಿರು ವುದು ಸಂಸ್ಥೆಯ ಬೆಳವಣಿಗೆ ಕುಂಠಿತಗೊಳ್ಳಲು ಕಾರಣವಾಗಿದೆ.
ನಷ್ಟದಲ್ಲಿರುವ ಐಡಿಬಿಐ ಬ್ಯಾಂಕ್ ಜೊತೆ ಒಪ್ಪಂದ ರದ್ದುಪಡಿಸಬೇಕು, ಗ್ರಾಹಕರಿಗೆ ನೀಡುವ ಬೋನಸ್ ಹೆಚ್ಚಿಸಬೇಕು, ಅನೂರ್ಜಿತಗೊಂಡ ಪಾಲಿಸಿಯನ್ನು ಉರ್ಜಿತಗೊಳಿಸಲು ಇರುವ ಅವಧಿಯನ್ನು ಈ ಹಿಂದಿನಂತೆ 5 ವರ್ಷಕ್ಕೆ ವಿಸ್ತರಿಸಬೇಕು, ಜಿಎಸ್ಟಿಯನ್ನು ಈ ಹಿಂದಿನಂತೆ ಸಂಸ್ಥೆಯೇ ಭರಿಸಬೇಕು, ಐಆರ್ಡಿಎ ಸೂಚಿಸಿದಂತೆ ಎಜೆಂಟರ ಕಮಿಶನ ಹೆಚ್ಚಿಸಬೇಕು, ವಿಮಾ ಪ್ರತಿನಿಧಿಗಳ ಗ್ರಾಚ್ಯೂಟಿಯನ್ನು ಹೆಚ್ಚಿಸಬೇಕು, ಗ್ರಾಹಕರಿಗೆ ಪ್ರಿಮಿಯಮ್ ತುಂಬಲು ಸಕಾಲದಲ್ಲಿ ನೋಟಿಸ್ ಕಳುಹಿಸಬೇಕು, ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕೆಂಬ ಜೀವ ವಿಮಾ ಪ್ರತಿನಿಧಿಗಳ 8 ಬೇಡಿಕೆಗಳ ಹಕ್ಕೋತ್ತಾಯವನ್ನು ಮಂಡಿಸಿದರು.
ಈ ಸಂದರ್ಬದಲ್ಲಿ ಭಾರತೀಯ ಜೀವ ವಿಮಾ ಪ್ರತಿನಿದಿಗಳಾದ ಎಮ್.ಕೆ.ನಾಯ್ಕ, ಪಿ.ಡಿ.ನಾಯ್ಕ, ವೆಂಕಟೇಶ ನಾಯ್ಕ, ಹರೀಶ ಪೈ, ಪಾಂಡು ನಾಯ್ಕ, ಶಂಕರ ಬಿ.ನಾಯ್ಕ, ಸಿ.ಟಿ.ನಾಯ್ಕ, ಎಮ್.ಕೆ.ಗೊಂಡ, ಆರ್.ಎನ್.ಶೇಟ್ ಮುರ್ಡೇಶ್ವರ ಮುಂತಾದವರು ಇದ್ದರು.