ಸೆ.10ರಂದು ಉಡುಪಿ ಜಿಲ್ಲೆಯಲ್ಲಿ ಸಂಪೂರ್ಣ ಬಂದ್ ಸಾಧ್ಯತೆ
ವಿವಿಧ ಸಂಘಟನೆಗಳ ಬೆಂಬಲ; ಶಾಲಾ-ಕಾಲೇಜುಗಳಿಗೆ ರಜೆ
ಉಡುಪಿ, ಸೆ.9: ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸೆ.10ರಂದು ಸೋಮವಾರ ಕರೆ ನೀಡಿರುವ ‘ಭಾರತ್ ಬಂದ್’ ಉಡುಪಿ ಜಿಲ್ಲೆಯಲ್ಲಿ ಯಶಸ್ವಿಗೊಳ್ಳುವ ಎಲ್ಲಾ ಸಾಧ್ಯತೆಗಳು ಕಂಡುಬಂದಿದೆ.
ಕಾಂಗ್ರೆಸ್ ನೀಡಿರುವ ಬಂದ್ ಕರೆಗೆ ಈಗಾಗಲೇ ಜೆಡಿಎಸ್, ಎಡಪಕ್ಷ ಸಂಘಟನೆಗಳು ಸೇರಿದಂತೆ ಅನೇಕ ಪಕ್ಷಗಳು, ವಿವಿದ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಇದರೊಂದಿಗೆ ಪ್ರಮುಖವಾಗಿ ಖಾಸಗಿ ಎಕ್ಸ್ಪ್ರೆಸ್, ಸರ್ವಿಸ್ ಬಸ್ ಮಾಲಕರು ಹಾಗೂ ಸಿಬ್ಬಂದಿಗಳು, ಸಿಟಿಬಸ್ ಸಂಘಟನೆಗಳು ಸಹ ಬಂದ್ಗೆ ಬೆಂಬಲ ಸೂಚಿಸಿವೆ.
ಇದರೊಂದಿಗೆ ಜಿಲ್ಲೆಯಲ್ಲಿ ಅಟೋರಿಕ್ಷಾಗಳು ಮತ್ತು ಕೆಎಸ್ಸಾರ್ಟಿಸಿ ಬಸ್ಗಳು ಸಹ ನಾಳೆ ರಸ್ತೆಗಿಳಿಯುವ ಸಾಧ್ಯತೆ ಇಲ್ಲವಾದ ಕಾರಣ ಜಿಲ್ಲೆಯಲ್ಲಿ ಎಲ್ಲಾ ವ್ಯವಹಾರಗಳು ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಜಿಲ್ಲೆಯ ಎಲ್ಲಾ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಕಾಲೆೀಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ.
ಬಿಜೆಪಿ ಬಂದ್ನ್ನು ಶತಾಯ-ಗತಾಯ ವಿರೋಧಿಸುತ್ತಿರುವುದರಿಂದ ಬಿಜೆಪಿ ಹಾಗೂ ಸಹ ಸಂಘಟನೆಗಳ ಕಟ್ಟಾ ಬೆಂಬಲಿಗರು ನಾಳೆ ಬಂದ್ನಲ್ಲಿ ಭಾಗವಹಿ ಸುವ ಸಾಧ್ಯತೆ ಕಡಿಮೆ ಇದೆ. ಬಿಜೆಪಿ ಬೆಂಬಲಿತ ಖಾಸಗಿ ಬಸ್, ಸಿಟಿ ಬಸ್ ಮಾಲಕರು, ಅಟೋ ಯೂನಿಯನ್ ಸದಸ್ಯ ಹಾಗೂ ವರ್ತಕರು ಮತ್ತು ಉದ್ದಿಮೆದಾರರ ನಿಲುವು ಖಚಿತವಾಗಿ ಗೊತ್ತಾಗಿಲ್ಲ.
ಈ ನಡುವೆ ಕಾಂಗ್ರೆಸ್ ಪಕ್ಷದ ನಾಯಕರು ಇಂದು ಉಡುಪಿಯ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ ನಾಳಿನ ಬಂದ್ಗೆ ಬೆಂಬಲ ಸೂಚಿಸಿ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ವಿನಂತಿಸಿದ್ದಾರೆ. ವರ್ತಕರು ಮತ್ತು ವ್ಯಾಪಾರಿಗಳಲ್ಲಿ ಹೆಚ್ಚಿನವರು ಬಿಜೆಪಿಯ ಬೆಂಬಲಿಗರಾಗಿ ರುವುದರಿಂದ ಅವರ ನಡೆ ಏನೆಂಬುದು ರಹಸ್ಯವಾಗಿದೆ.