ಪೆಟ್ರೋಲ್ ಅಕ್ರಮ ದಾಸ್ತಾನಿನಿಂದ ಬೆಲೆ ಏರಿಕೆ: ಜನಾರ್ದನ ಪೂಜಾರಿ
‘ಟಿಕೆಟ್ ನೀಡಿದರೆ ಚುನಾವಣೆಗೆ ಸಜ್ಜು’
ಮಂಗಳೂರು, ಸೆ. 9: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಅಕ್ರಮ ದಾಸ್ತಾನಿನಿಂದ ಬೆಲೆ ಏರಿಕೆ ಉಂಟಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ತೈಲಬೆಲೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರದ ಮಾಜಿ ವಿತ್ತ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ನಗರದಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಅಕ್ರಮ ದಾಸ್ತಾನುಗಾರರನ್ನು ಜೈಲಿಗೆ ಹಾಕಬೇಕು. ಅಂತಹ ಕ್ರಮ ಕೈಗೊಂಡರೆ ಒಂದೇ ದಿನದಲ್ಲಿ ಅಕ್ರಮಗಳೆಲ್ಲ ನಿಂತು ಹೋಗಿ ಬೆಲೆ ಇಳಿಕೆಯಾಗುತ್ತದೆ ಎಂದು ಅವರು ಪ್ರಧಾನಿಗೆ ಸಲಹೆ ನೀಡಿದರು.
ಬಂದ್ಗೆ ಕರೆ ಕೊಟ್ಟ ಕಾಂಗ್ರೆಸ್ ಅದರ ಫಲವನ್ನು ಅನುಭವಿಸಬೇಕಾಗುತ್ತದೆ. ಬಂದ್ ಕರೆ ನೀಡುವವರೇ ಅದರಿಂದಾಗುವ ನಷ್ಟ ಭರಿಸಬೇಕು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಕಾಂಗ್ರೆಸ್, ಬಿಜೆಪಿ ಬಂದ್ ಕರೆ ನೀಡುವುದು ಸುಲಭ. ಆದರೆ ಅದರಿಂದ ಉಂಟಾಗುವ ಸಾವಿರಾರು ಕೋಟಿ ರೂ. ನಷ್ಟವನ್ನು ಯಾರು ಭರಿಸುತ್ತಾರೆ ? ಈ ಸಂಬಂಧ ಪ್ರಕರಣ ದಾಖಲಾದರೆ ಅದರಿಂದ ಪಾರಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ತಾನು ಕೇಂದ್ರ ಅರ್ಥಖಾತೆ ಸಚಿವನಾಗಿದ್ದಾಗ ಅಬಕಾರಿ ಶುಲ್ಕ ಕಡಿಮೆ ಮಾಡಲು ಭಾರಿ ಪ್ರಯತ್ನಿಸಿದ್ದೆ. ಹಾಗೆ ಮಾಡಿದ್ದು ತಪ್ಪೆಂದು ಕೊನೆಗೆ ನನಗೂ ಅನುಭವವಾಯಿತು. ಇಂಧನದ ಮೇಲಿನ ರಾಜ್ಯದ ಸೆಸ್ ಕಡಿತಗೊಳಿಸಬೇಕು ಎನ್ನುವುದು ಸರಿಯಲ್ಲ ಎಂದು ಅವರು ತಿಳಿಸಿದರು.
‘ಟಿಕೆಟ್ ನೀಡಿದರೆ ಚುನಾವಣೆಗೆ ಸಜ್ಜು’
ಮುಂದಿನ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದರೆ ಸ್ಪರ್ಧಿಸಲು ತಾನು ಸಿದ್ಧನಿದ್ದೇನೆ. ನಾನು ಚುನಾವಣೆಗೆ ನಿಲ್ಲಲೂಬಹುದು, ನಿಲ್ಲದೆಯೂ ಇರಬಹುದು ಎಂದು ಕೇಂದ್ರದ ಮಾಜಿ ವಿತ್ತ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಹೇಳಿದರು.