ಭಟ್ಕಳ; ಭಾರತ್ ಬಂದ್ ಕರೆಗೆ ಜೆಡಿಎಸ್, ತಂಝೀಮ್ ಸಂಸ್ಥೆ ಬೆಂಬಲ
ಭಟ್ಕಳ, ಸೆ. 9: ಭಾರತ್ ಬಂದ್ ಗೆ ಕರೆಗೆ ತಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಜೆ.ಡಿ.ಎಸ್ ತಾಲೂಕಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ತಿಳಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿದ್ದು ಜನಸಾಮಾನ್ಯರು ದಿವಾಳಿಯಾಗುತ್ತಿದ್ದಾರೆ. ನಾಳೆಯ ಬಂದ್ ಗೆ ತಮ್ಮ ಪಕ್ಷ ಎಲ್ಲ ರೀತಿಯಿಂದ ಬೆಂಬಲ ನೀಡುತ್ತಿದ್ದು ಒಂದು ವೇಳೆ ಕಾಂಗ್ರೆಸ್ ಪಕ್ಷವು ರ್ಯಾಲಿ ನಡೆಸಿದ್ದಲ್ಲಿ ಜೆ.ಡಿ.ಎಸ್. ನ ಎಲ್ಲ ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದ್ದಾರೆ.
ತಂಝೀಮ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಬೆಂಬಲ: ಭಾರತ್ ಬಂದ್ ಗೆ ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್, ಸಿ.ಪಿ.ಐ.(ಎಂ) ಪಕ್ಷ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ರವಿವಾರ ಸಂಜೆ ತಂಝೀಮ್ ಕಾರ್ಯಾಲಯದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕರೆಗೆ ಬೆಂಬಲ ನೀಡುವ ಕುರಿತು ನಿರ್ಣಯವನ್ನು ಕೈಗೊಂಡಿದ್ದು ಭಟ್ಕಳದ ಎಲ್ಲರು ಸೋಮವಾರ ಒಂದು ದಿನ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಸ್ಥಗಿತಗೊಳಿಸಿ ಭಾರತ್ ಬಂದ್ ಗೆ ಸಹಕರಿಸುವಂತೆ ತಂಝೀಮ್ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಮುಹಿದ್ದೀನ್ ಖರೂರಿ ಜನತೆಯಲ್ಲಿ ವಿನಂತಿಸಿಕೊಂಡಿದ್ದಾರೆ.