ಜಾತಿ ಸಂಘಟನೆಯಿಂದ ಸಂಘರ್ಷ ಸಲ್ಲದು: ಉಮಾನಾಥ ಕೋಟ್ಯಾನ್
ಮೂಡುಬಿದಿರೆ, ಸೆ.9: ಸಮುದಾಯದ ಅಭಿವೃದ್ಧಿಯಿಂದ ಸಮಾಜದ ಅಭಿವೃದ್ಧಿಯಾಗಬೇಕು. ಎಲ್ಲಾ ಜಾತಿ, ಧರ್ಮದವರನ್ನು ಸಹೋದರತೆಯಿಂದ ಕಾಣಬೇಕು. ಜಾತಿ ಸಂಘಟನೆಯನ್ನು ಬಲಪಡಿಸುವುದೆಂದರೆ ಇನ್ನೊಂದು ಜಾತಿ, ಧರ್ಮಗಳ ಜತೆ ಸಂಘರ್ಷಕ್ಕಾಗಿ ಆಗಬಾರದುಸಂತ ನಾರಾಯಣ ಗುರುಗಳ ಸಂದೇಶ ಕೂಡ ಇದೇ ಆಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಕಾಮಧೇನು ಸಭಾಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುವಿನ 164ನೇ ಜನ್ಮದಿನಾಚರಣೆ ಮತ್ತು ಮೂರ್ತಿ ಪ್ರತಿಷ್ಠಾಪನೆಯ 32ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸಭಾ ಕರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿ ತುಳು ಚಿತ್ರರಂಗದ ಹಾಸ್ಯ ಕಲಾವಿದ ಭೋಜರಾಜ ವಾಮಂಜೂರು ಮಕ್ಕಳ ಆಸಕ್ತಿಯ ವಿಷಯದಲ್ಲಿ ಹೆತ್ತವರು ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಯಾವಾಗಲು ಅತಿಯಾದ ಆತ್ಮವಿಶ್ವಾಸವಿರಬಾರದು. ನಾರಾಯಣ ಗುರುಗಳ ತತ್ವದಂತೆ ಎಲ್ಲರನ್ನು ಪ್ರೀತಿಯಿಂದ ಕಾಣಬೇಕು ಎಂದರು.
ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದ ಉಮಾನಾಥ ಕೋಟ್ಯಾನ್, ಎಂಎಲ್ಸಿ ಹರೀಶ್ ಕುಮಾರ್, ರಂಗಭೂಮಿಯಲ್ಲಿ ಶ್ರೇಷ್ಠ ಸಾಧನೆಗಾಗಿ ಭೂಜರಾಜ ವಾಮಂಜೂರು, ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಸ್ನಾತಕೋತ್ತರ ಅಂತಿಮ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತರಾದ ನಿಶಾ ಗೋಪಾಲ್ ಮತ್ತು ಪ್ರಿಯಾ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಬಿಲ್ಲವ ಸಂಘದ ಪ್ರಮುಖರಾದ ವಾಸು ಪೂಜಾರಿ, ಶಶಿಧರ್ ಅಂಚನ್ ಮತ್ತಿತರರು ಉಪಸ್ಥಿತರಿದ್ದರು. ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ರವೀಂದ್ರ ಎಂ.ಸುವರ್ಣ ಅಧ್ಯಕ್ಷತೆ ವಹಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಡಾ.ರಮೇಶ್ ಕುಮಾರ್, ಉದ್ಯಮಿ ರಮೇಶ್ ಸರಿಪಲ್ಲ, ನಾರಾಯಣಗುರು ಸೇವಾದಳದ ಅಧ್ಯಕ್ಷ ರಮೇಶ್ ಅಮೀನ್, ಮಹಿಳಾ ಘಟಕದ ಅಧಕ್ಷೆ ಗೀತಾ ಸುಭಾಸ್ ಮತ್ತಿತರರು ಉಪಸ್ಥಿತರಿದ್ದರು. ಆಡಳಿತ ಮಂಡಳಿ ಸದಸ್ಯ ಶಂಕರ್ ಕೋಟ್ಯಾನ್ ಸ್ವಾಗತಿಸಿದರು. ರೋಹನ್ ನಿರೂಪಿಸಿದರು. ಸದಾನಂದ ಬಿ.ಅಂಚನ್ ವಂದಿಸಿದರು.