ಕಾಪು, ಪಡುಬಿದ್ರೆಯಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ
ಪಡುಬಿದ್ರೆ, ಸೆ.10: ತೈಲ ಬೆಲೆ ಏರಿಕೆಯಾಗಿರುವುದನ್ನು ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ನೀಡಿರುವ ಬಂದ್ ಕರೆಗೆ ಕಾಪು ಹಾಗೂ ಪಡುಬಿದ್ರೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಾಪು, ಉಚ್ಚಿಲ, ಎರ್ಮಾಳು, ಪಡುಬಿದ್ರೆ, ಪಲಿಮಾರು, ಮುದರಂಗಡಿಯಲ್ಲಿ ಬೆಳಗ್ಗೆ 10 ಗಂಟೆಯವರೆಗೆ ಅಂಗಡಿಮುಗ್ಗಟ್ಟುಗಳು ಎಂದಿನಂತೆ ತೆರೆದಿತ್ತು. ಕಾಪು ಹಾಗೂ ಪಡುಬಿದ್ರೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಂಗಡಿ ಮಾಲಕರಿಗೆ, ರಿಕ್ಷಾ, ಕಾರು ಚಾಲಕರಿಗೆ ಬಂದ್ ನಡೆಸುವಂತೆ ಮನವಿ ಮಾಡಿದರು. ಇವರ ಮನವಿಗೆ ಸ್ಪಂದಿಸಿ ಕೆಲವಡೆಗಳಲ್ಲಿ ಅಂಗಡಿಮುಂಗಟ್ಟುಗಳು ಬಳಿಕ ಮುಚ್ಚಲ್ಪಟ್ಟವು. ಕೆಲ ಸಮಯದ ಬಳಿಕ ಮತ್ತೆ ಕೆಲವು ಅಂಗಡಿ ಮಾಲಕರು ಅಂಗಡಿಗಳನ್ನು ತೆರೆದು ವ್ಯಾಪಾರ ಆರಂಭಿಸಿದರು.
ಕಾಪು ಪೊಲಿಪುವಿನ ರಾಷ್ಟ್ರೀಯ ಹೆದ್ದಾರಿಯ 66ರಲ್ಲಿ ಮಾಜಿ ಶಾಸಕ ವಿನಯಕುಮಾರ್ ನೇತೃತ್ವದಲ್ಲಿ ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಹಾಗೂ ತೈಲ ಬೆಲೆ ಏರಿಕೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.