ಫರಂಗಿಪೇಟೆಯಲ್ಲಿ ಎಸ್ಡಿಪಿಐಯಿಂದ ಪ್ರತಿಭಟನೆ
ಫರಂಗಿಪೇಟೆ, ಸೆ.10: ಇಂಧನಗಳ ಬೆಲೆಯೇರಿಕೆಯನ್ನು ವಿರೋಧಿಸಿ ನಡೆಯುತ್ತಿರುವ ಭಾರತ ಬಂದ್ ಹಿನ್ನೆಲೆಯಲ್ಲಿ ಎಸ್ಡಿಪಿಐ ಪುದು ಗ್ರಾಮ ಸಮಿತಿಯ ವತಿಯಿಂದ ಫರಂಗಿಪೇಟೆಯಲ್ಲಿಂದು ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಪಕ್ಷದ ಮುಖಂಡ ರಿಯಾಝ್ ಫರಂಗಿಪೇಟೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯಾದರೂ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾತ್ರ ತೈಲ ಬೆಲೆಯನ್ನು ಏರಿಸುತ್ತ ಜನರ ಜೀವನದ ಮೇಲೆ ಬರೆ ಎಳೆಯುತ್ತಿದೆ. ನೋಟ್ ಬ್ಯಾನ್, ಜಿ.ಎಸ್.ಟಿ. ಇತ್ಯಾದಿಗಳಿಂದ ಜನಸಾಮಾನ್ಯರ ಜೀವನ ದುಸ್ತರವಾಗಿದೆ. ಇದಲ್ಲದೆ ಗುಂಪು ಹಿಂಸೆಯಿಂದ ದೇಶದಲ್ಲಿ ಭಯಾನಕ ವಾತಾವರಣ ಸೃಷ್ಟಿಯಾಗಿ ಅಘೋಶಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ಎಸ್ಡಿಪಿಐ ಪುದು ಗ್ರಾಮ ಸಮಿತಿಯ ಅಧ್ಯಕ್ಷ ಇಕ್ಬಾಲ್ ಅಮೆಮಾರ್ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮಂಗಳೂರು ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಸುಲೈಮಾನ್ ಉಸ್ತಾದ್, ಪುದು ಗ್ರಾಪಂ ಸದಸ್ಯ ನಝೀರ್, ತುಂಬೆ ಗ್ರಾಪಂ ಸದಸ್ಯ ಝಹೂರು, ತುಂಬೆ ಗ್ರಾಮ ಸಮಿತಿಯ ಅಧ್ಯಕ್ಷ ಅಝೀಝ್ ತುಂಬೆ, ಪುದು ಗ್ರಾಮ ಸಮಿತಿಯ ಉಪಾಧ್ಯಕ್ಷ ಅಬ್ಬಾಸ್ ಪೇರಿಮಾರ್ಮೊದಲಾದವರು ಭಾಗವಹಿಸಿದ್ದರು. ಖಾದರ್ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.