ಮಂದಾರ್ತಿ ನಕಲಿ ಸೇವಾ ಚೀಟಿ ಪ್ರಕರಣ: ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಕುಂದಾಪುರ, ಸೆ.10: ಮಂದಾರ್ತಿ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಕಲಿ ಸೇವಾ ಚೀಟಿ ನೀಡಿದ ಪ್ರಕರಣದ ಇಬ್ಬರು ಆರೋಪಿಗಳು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ತಿರಸ್ಕರಿಸಿ ಆದೇಶ ನೀಡಿದೆ.
ಆರೋಪಿಗಳಾದ ರಾಜೇಶ್ ನಾಯ್ಕ ಹಾಗೂ ಅಶೋಕ್ ಕುಂದರ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಪ್ರಾಸಿಕ್ಯೂಶನ್ ಪರ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.
ಇವರಿಬ್ಬರು ದೇವರ ದರ್ಶನಕ್ಕೆ ಬರುವ ಭಕ್ತರಿಂದ ಸೇವೆಯ ಹಣ ಪಡೆದು ದೇವಸ್ಥಾನದ ಚೀಟಿಯ ಬದಲು ತಾವೇ ಮುದ್ರಿಸಿರುವ ನಕಲಿ ಚೀಟಿಗಳನ್ನು ನೀಡಿ ವಂಚಿಸುತ್ತಿದ್ದರು. ಈ ಸೇವಾ ಚೀಟಿಯಲ್ಲಿ ಕ್ರಮ ಸಂಖ್ಯೆ ಒಂದೇ ಇರು ವುದನ್ನು ಗಮನಿಸಿದ ಭಕ್ತರು ನೀಡಿದ ದೂರಿನ ಹಿನ್ನೆಲೆಯಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಅದರಂತೆ ಜಿಲ್ಲಾಧಿಕಾರಿಗಳು ಇವರಿಬ್ಬರನ್ನು ಅಮಾನತು ಗೊಳಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆದೇಶ ನೀಡಿದ್ದರು.