ಜೆಸಿಐ ಸಂಸ್ಥೆಯಿಂದ ಉತ್ತಮ ರೀತಿಯ ಸಮಾಜಸೇವೆ: ಸಾಜಿದ್ ಮುಲ್ಲಾ
ಭಟ್ಕಳ, ಸೆ. 11: ಜೆಸಿಐ ಸಂಸ್ಥೆಯು ಸೇವಾ ಕಾರ್ಯದಲ್ಲಿ ಜನತೆಗೆ ಉತ್ತಮ ಸೇವೆ ನೀಡುತ್ತಿದ್ದು ಉತ್ತಮ ಗುಣನಡತೆಯನ್ನು ಕಲಿಯಲೂ ಕೂಡಾ ಇದು ತುಂಬಾ ಸಹಕಾರಿ ಎಂದು ಸಹಾಯಕ ಆಯುಕ್ತ ಸಾಜಿದ ಅಹಮ್ಮದ್ ಮುಲ್ಲಾ ಅವರು ಹೇಳಿದರು.
ಅವರು ಭಟ್ಕಳ ಸಿಟಿ ಜೇಸೀಸ್ ವತಿಯಿಂದ ಎರ್ಪಡಿಸಲಾಗಿದ್ದ ಜೆ.ಸಿ. ಸಪ್ತಾಹ ಕಾರ್ಯಕ್ರಮದ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಟ್ಕಳ ಸಿಟಿ ಜೇಸಿಸ್ ಅಧ್ಯಕ್ಷ ಅಬ್ದುಲ್ ಜಬ್ಬಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಕುಂದಾಪುರದ ಖ್ಯಾತ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಸುಮಾರು 18 ರಿಂದ 30 ವರ್ಷ ಪ್ರಾಯದೊಳಗಿನ ಯುವಕರು ಜೆಸಿಐ ಸಂಸ್ಥೆಯನ್ನು ಸೇರದೇ ಇದ್ದಲ್ಲಿ ಅವರು ಜೀವನದಲ್ಲಿ ಒಂದು ಅವಕಾಶವನ್ನು ಕಳೆದುಕೊಂಡಂತೆ ಎಂದ ಅವರು ಯುವ ಜನತೆಗೆ ಜೆಸಿಐ ಉತ್ತಮ ತರಬೇತಿಯನ್ನು ನೀಡಬಲ್ಲದು, ಆತನನ್ನು ಉತ್ತಮ ನಾಗರೀಕನ್ನಾಗಿ ಮಾಡುವುದು ಈ ಸಂಸ್ಥೆಯಿಂದ ಸಾಧ್ಯ ಎಂದರು.
ಯುವ ನಾಯಕತ್ವ ನಿರ್ಮಾಣ ಮಾಡುವಲ್ಲಿ, ಸುಪ್ತ ಪ್ರತಿಭೆಗಳನ್ನು ಗುರುತಿಸುವಲ್ಲಿ ಇದೊಂದು ಉತ್ತಮ ವೇದಿಕೆ ಎಂದ ಅವರು ಸಂಘ ಶಕ್ತಿಯಿಂದ ಎನೂ ಮಾಡಲು ಸಾಧ್ಯ ಎನ್ನುವುದನ್ನು ಜಪಾನಿನಲ್ಲಿ ಒಮ್ಮೆ ರೈಲು ಹಳಿ ತಪ್ಪಿದಾಗ ಎಲ್ಲ ಪ್ರಯಾಣಿಕರು ಕೆಳಕ್ಕಿಳಿದು ಮತ್ತೆ ಹಳಿಯಲ್ಲಿರಿಸಿದ್ದನ್ನು ಉದಾಹರಿಸಿದರು.
ಜೆಸಿಐ ಸಂಸ್ಥೆ ಕೋಮು ಸೌಹಾರ್ದತೆಗೆ ಉತ್ತಮ ಮಾದರಿ ಎಂದ ಅವರು ಇಲ್ಲಿ ಯಾವುದೇ ರೀತಿಯ ಬೇಧ ಭಾವ ಕಾಣಲು ಸಾಧ್ಯವಿಲ್ಲ, ಪ್ತತಿಯೋರ್ವರೂ ಕೂಡಾ ನಾನೋರ್ವ ನಾಗರೀಕ ಎಂದು ತಿಳಿದಲ್ಲಿ ಮಾತ್ರ ಕೋಮು ಸೌಹಾರ್ಧತೆ ಸಾಧ್ಯ. ಇಲ್ಲಿ ಕೂಡಾ ಯಾವುದೇ ಸಂದರ್ಭದಲ್ಲಿಯೂ ಕೂಡಾ ಜಾತಿ ಕೇಳುವುದಿಲ್ಲ ಎಂದ ಅವರು ಇಲ್ಲಿ ವೈದ್ಯ, ವ್ಯಾಪಾರಿ, ವಕೀಲ, ದಂತ ವೈದ್ಯ, ನಾಗರೀಕ ಎಂದಷ್ಟೇ ಗುರುತಿಸಲ್ಪಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಮುಖ್ಯ ಅತಿಥಿ ಡಿವೈಎಸ್ಪಿ ವೆಲೆಂಟೈನ್ ಡಿಸೋಜ ಮಾತನಾಡಿ ಜೆಸಿಐ ರಾಷ್ಟ್ರೀಯ ಭಾವೈಕ್ಯತೆಯ ಸಂಕೇತವಾಗಿದ್ದು ಭಟ್ಕಳದಲ್ಲಿ ಅಲ್ಪ ಅವಧಿಯಲ್ಲಿಯೇ ಉತ್ತಮ ಸೇವೆಯಿಂದ ಜನಜನಿತವಾಗಿದೆ ಎಂದರು. ಭಟ್ಕಳದಲ್ಲಿ ಸಂಚಾರ ನಿಯಂತ್ರಣ ಮಾಡಲು ಸಂಸ್ಥೆಯ ಸಹಾಯ, ಸಹಕಾರ ನೀಡಿದ್ದನ್ನು ಸ್ಮರಿಸಿದ ಅವರು ಇಲಾಖೆಯೊಂದಿಗೆ ಕೈಜೋಡಿಸಿದ್ದಕ್ಕಾಗಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿರುವ ಆರೋಗ್ಯ ಇಲಾಖೆಯ ಈರಯ್ಯ ದೇವಡಿಗ, ನಿವೃತ್ತ ಅಂಚೆ ಪೇದೆ ನಾರಾಯಣ ಪೈ, ಅಗ್ನಿಶಾಮಕ ದಳದ ನಜೀರ್ ಅಹಮ್ಮದ್ ಅತ್ತಾರ್ ಹಾಗೂ ಪೊಲೀಸ್ ಇಲಾಖೆಯ ವಿನಾಯಕ ಎಸ್. ಪಾಟೀಲ್ ಹಾಗೂ ಜೆ.ಸಿ.ಐ. ರೋಲ್ ಮೋಡೆಲ್ ಮಲ್ಲಿಕಾರ್ಜುನ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಜೆ.ಪಿ.ಐ. ವಲಯಾಧ್ಯಕ್ಷ ರಾಘವೇಂದ್ರ ಪ್ರಭು ಕರವಾಲ, ಸಂಧ್ಯಾ, ನಿಕಟಪೂರ್ವ ಅಧ್ಯಕ್ಷ ನಾಗರಾಜ ಶೇಟ್, ನಿಯೋಜಿತ ಅಧ್ಯಕ್ಷ ರಮೇಶ ಖಾರ್ವಿ, ಸಾಜಿದಾ ಮುಂತಾದವರು ಉಪಸ್ಥಿತಿತರಿದ್ದರು.