ಶಾಲಾ ವಿದ್ಯಾರ್ಥಿನಿಯರಿಗೆ ಆರೋಗ್ಯ ಮಾಹಿತಿ
ಉಡುಪಿ, ಸೆ.11: ಭಾರತೀಯ ವಿಕಾಸ ಟ್ರಸ್ಟ್ ಮತ್ತು ಸೆಲ್ಕೋ ಪೌಂಢೇಶನ್ ಬೆಂಗಳೂರು ಇದರ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಹದಿ ಹರೆಯದ ಆರೋಗ್ಯ ಸಮಸ್ಯೆಗಳು ಹಾಗೂ ಅವುಗಳ ನಿರ್ವಹಣೆಯ ಕುರಿತು ಆರೋಗ್ಯ ಮಾಹಿತಿ ಕಾರ್ಯಕ್ರಮ ಇತ್ತೀಚೆಗೆ ಉಡುಪಿ ರಾಜೀವ ನಗರದ ಸರಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರುಗಿತು.
ಆರೋಗ್ಯ ಮಾಹಿತಿ ಕಾರ್ಯಕ್ರಮಗಳಲ್ಲಿ ಎರಡೂ ಶಾಲೆಗಳ ಸುಮಾರು 75 ಮಂದಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಸಂಪನ್ನೂಲ ವ್ಯಕ್ತಿಯಾಗಿ ಮಣಿಪಾಲದ ಕಾಲೇಜು ಆಫ್ ನರ್ಸಿಂಗ್ನ ಪ್ರೊ. ಪ್ರಭು ಭಾಗವಹಿಸಿ ಅಗತ್ಯ ಮಾಹಿತಿಗಳನ್ನು ನೀಡಿದರು.
ಹದಿಹರೆಯದಲ್ಲಿ ಉಂಟಾಗುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಾಕ ಬದಲಾವಣೆಗಳನ್ನು ಹೇಳುತ್ತಾ ಈ ಹಂತದಲ್ಲಿ ಹುಡುಗಿಯರು ಬಹಳ ಜಾಗರೂಕತೆಯಲ್ಲಿ ತಮ್ಮಲ್ಲಿ ಆಗುವ ಬದಲಾವಣೆಗಳನ್ನು ಅರಿತುಕೊಂಡು ಏನಾದರೂ ಸಮಸ್ಯೆಗಳು ಉಂಟಾದರೆ ಅವನ್ನು ನಿಭಾಯಿಸುವ ಕ್ರಮವನ್ನು ಅರಿತುಕೊಳ್ಳಬೇಕು ಎಂದರು.
ಸರಿಯಾದ ಆಹಾರ ಕ್ರಮ, ವೈಯಕ್ತಿಕ ಸ್ವಚ್ಛತೆಯ ಕಡೆಗೆ ವಿಶೇಷ ಗಮನ, ಸೂಕ್ತ ಸಂದರ್ಭದಲ್ಲಿ ವೈದ್ಯರ ಸಲಹೆ ಪಡೆಯುವುದು ಮುಂತಾದ ವಿಚಾರಗಳ ಬಗ್ಗೆ ಉತ್ತಮ ಮಾಹಿತಿಯನ್ನು ನೀಡಿದರಲ್ಲದೆ, ವಿದ್ಯಾರ್ಥಿನಿಯರ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿದರು. ಉತ್ತಮ ಆರೋಗ್ಯವು ವೈಯಕ್ತಿಕ ಬೆಳವಣಿಗೆ ಹಾಗೂ ಕಲಿಕೆಗೂ ಪೂರಕ ಎಂಬುದನ್ನು ಮನವರಿಗೆ ಮಾಡಿಸಿದರು.
ಕಾರ್ಯಕ್ರಮ ಸಂಯೋಜಿಸಿದ ಬಿವಿಟಿಯ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಅತಿಥಿಗಳನ್ನು ಸ್ವಾಗತಿಸಿದರು.