ಮಂಗಳೂರು: ಕವಿತಾ ಟ್ರಸ್ಟ್ನಿಂದ ಕವಿತಾ ದತ್ತಿ ಉಪನ್ಯಾಸ
ಮಂಗಳೂರು, ಸೆ.11: ಕೊಂಕಣಿ ಕಾವ್ಯ ಕ್ಷೇತ್ರದ ಹಿರಿಮೆಗಾಗಿ ದುಡಿಯುತ್ತಿರುವ ಕವಿತಾ ಟ್ರಸ್ಟ್ ಆಯೋಜಿಸುವ ಏಳನೇ ವರ್ಷದ ಜೇಮ್ಸ್ ಮತ್ತು ಶೋಭಾ ಮೆಂಡೊನ್ಸಾ ಕವಿತಾ ದತ್ತಿ ಉಪನ್ಯಾಸವು ಸೆ.15ರಂದು ಬೆಂದೂರಿನ ಸೈಂಟ್ ಆಗ್ನೆಸ್ ಕಾಲೇಜಿನ ಸಭಾಂಗಣದಲ್ಲಿ ಮಧ್ಯಾಹ್ನ 4:30ಕ್ಕೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಗುಜರಾತಿ ಕವಿ ಮತ್ತು ಸಾಹಿತಿ ಪ್ರಬೋಧ್ ಪಾರಿಖ್ ಉಪನ್ಯಾಸ ನೀಡಲಿದ್ದಾರೆ.
ತತ್ವಶಾಸ್ತ್ರದ ನಿವೃತ್ತ ಉಪನ್ಯಾಸಕರಾಗಿರುವ ಪಾರಿಖ್ ಪ್ರಸ್ತುತ ಮುಂಬೈ ಚಲನಚಿತ್ರ ಸಂಬಂಧಿ ಎರಡು ಸಂಸ್ಥೆಗಳ ಪ್ರಮುಖರಾಗಿದ್ದು ಕಲೆ, ಸಿನೆಮಾ ಮತ್ತು ಸಾಹಿತ್ಯದ ಬಗ್ಗೆ ದೇಶ ವಿದೇಶಗಳಲ್ಲಿ ಉಪನ್ಯಾಸ ನೀಡುತ್ತಿರುತ್ತಾರೆ.
ಭಾರತ ಸಂಸ್ಕೃತಿ ಸಚಿವಾಲಯ ಐಸಿಎಸ್ಎಸ್ಆರ್, ಸಾಹಿತ್ಯ ಅಕಾಡಮಿ, ನ್ಯಾಶನಲ್ ಗ್ಯಾಲರಿ ಆಫ್ ಮೊಡರ್ನ್ ಆರ್ಟ್ ಇವುಗಳ ಪರವಾಗಿ ರವೀಂದ್ರ ನಾಥ್ ಠಾಗೋರ್ ಕಲೆ ಮತ್ತು ಸಾಹಿತ್ಯದ ಬಗ್ಗೆ ಫ್ರಾನ್ಸ್, ಆಸ್ಟ್ರೇಲಿಯಾ, ಸ್ಪೇನ್, ಜರ್ಮನಿ ಹಾಗೂ ಡೆಲ್ಲಿ, ಮುಂಬೈ, ಕೊಲ್ಕತ್ತಾ ಮತ್ತು ಚೆನ್ನೈನಲ್ಲಿ ಉಪನ್ಯಾಸ ನೀಡಿದ್ದಾರೆ.
ಗುಜರಾತಿ ಸಾಹಿತ್ಯದ ವಿವಿಧ ಆಯಾಮಗಳ ಬಗ್ಗೆ ಬರೆದಿರುವ ಅವರ ಕತೆ, ಕವಿತೆ ಮತ್ತು ಪತ್ರಲೇಖನ ಸಂಕಲನಗಳು ಪ್ರಕಟವಾಗಿವೆ. ಅವರಿಗೆ ಹಲವಾರು ಪುರಸ್ಕಾರಗಳು ದೊರೆತಿವೆ.
2002ರಲ್ಲಿ ಸ್ಥಾಪನೆಗೊಂಡ ಕವಿತಾ ಟ್ರಸ್ಟ್, ಕೊಂಕಣಿ ಕವಿತೆಗೆ ಉನ್ನತ ದರ್ಜೆ, ಮಕ್ಕಳು ಮತ್ತು ಯುವಜನತೆಗೆ ಕಾವ್ಯದ ರುಚಿ ಹಾಗೂ ಜನಸಾಮಾನ್ಯ ರೆಡೆಗೆ ಕೊಂಕಣಿ ಕವಿತೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಾ ನಿರಂತರತೆಯನ್ನು ಕಾಯ್ದುಕೊಂಡು ಬಂದಿದೆ.