ಕಾರ್ಕಳ: 94 ಸಿಸಿ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ
ಕಾರ್ಕಳ, ಸೆ. 11: ಕಾರ್ಕಳ ಕಸಬಾ ಹಾಗೂ ಕುಕ್ಕುಂದೂರು ಗ್ರಾಮಗಳಲ್ಲಿ ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದ 126 ಜನರಿಗೆ 94 ಸಿಸಿ ಯಡಿಯಲ್ಲಿ ಹಕ್ಕು ಪತ್ರ ನೀಡಲಾಗಿದೆ. ಗ್ರಾಮಾಂತರದಲ್ಲಿ 137 ಏಕಕಾಲದಲ್ಲಿ ನೀಡಲಾಗಿದೆ. ಡೀಮ್ಡ್ ಫಾರೆಸ್ಟ್ ಇರುವ ಕಡೆಗಳಲ್ಲಿ ಇದು ಕಷ್ಟಸಾಧ್ಯವಾಗಿದೆ ಎಂದು ಶಾಸಕ ಹಾಗೂ ವಿಧಾನಸಭಾ ಪ್ರತಿಪಕ್ಷ ಮುಖ್ಯ ಸಚೇತಕ ವಿ. ಸುನೀಲ್ ಕುಮಾರ್ ಹೇಳಿದರು.
ತಾಲೂಕು ಪಂಚಾಯತ್ತಿನ ಉಣ್ಣಿಕೃಷ್ಣನ್ ಸಭಾಂಗಣದಲ್ಲಿ 94 ಸಿಸಿ ಹಕ್ಕು ಪತ್ರ ವಿತರಣೆ ಪ್ರಾಕೃತಿಕ ವಿಕೋಪದಡಿಯಲ್ಲಿ ಪರಿಹಾರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಜನರಿಗೆ ಹಕ್ಕು ಪತ್ರ ದೊರೆತ ಪರಿಣಾಮವಾಗಿ ನಿವೇಶನಕ್ಕೆ ಮಾಲಿಕತ್ವ ಬರುತ್ತಿರುದರಿಂದ ಸರಕಾರದ ಸವಲತ್ತು ಪಡೆಯಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಇನಷ್ಟು ಅರ್ಹ ಫಲಾನುಭವಿಗಳಿಗೆ ಈ ಸವಲತ್ತು ನೀಡಲಾಗುವುದೆಂದರು. ಕಳೆದ 3 ತಿಂಗಳುಗಳಿಂದ ಸುರಿದ ಮಳೆಯಿಂದಾಗಿ ಬಹಳ ನಷ್ಟ ಉಂಟಾಗಿದೆ. ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಸಂತ್ರಸ್ಥರಾದ 07 ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. ಈ ಹಿಂದೆ 100 ಮಂದಿಗೆ ಪರಿಹಾರವನ್ನು ನೀಡಿಲಾಗಿದೆ. ನಷ್ಟಗಳು ಹೆಚ್ಚಾಗಿದ್ದರೂ ಸರಕಾರಿ ನಿಯಾಮಾವಳಿ ಪ್ರಕಾರ ಎಷ್ಟು ನೀಡಲು ಸಾಧ್ಯವೋ ಅಷ್ಟನ್ನು ಪರಿಹಾರ ರೂಪವಾಗಿ ನೀಡಲಾಗಿದೆ ಎಂದು ಹೇಳಿದರು.
ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿದರು. ತಾಲೂಕು ಪಂಚಾಯತ್ ಉಪಾಧ್ಯಕ್ಷ ಗೋಪಾಲಮೂಲ್ಯ, ಸದಸ್ಯರುಗಳಾದ ಅಶೋಕ್ ಶೆಟ್ಟಿ ಪುರಸಭಾ ಸದಸ್ಯರುಗಳಾದ ಪ್ರತಿಮಾ ರಾಣೆ, ಅಶ್ಪಕ್ ಅಹಮ್ಮದ್, ಹರೀಶ್ ಮೊಯಿಲಿ ಮೊದಲಾದವರು ಉಪಸ್ಥಿತರಿದ್ದರು.