ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ನನಗೆ ನ್ಯಾಯ ಒದಗಿಸಿ: ಸಚಿವ ಖಾದರ್ ಗೆ ಅಶ್ರಫ್ ಸಾಲೆತ್ತೂರು ಮನವಿ
ಮಂಗಳೂರು, ಸೆ.12: ಫೇಸ್ ಬುಕ್ ಪೋಸ್ಟ್ ಗೆ ಸಂಬಂಧಿಸಿ ಇತ್ತೀಚೆಗೆ ಬಂಧಿತರಾಗಿದ್ದ ಅಶ್ರಫ್ ಎಂ. ಸಾಲೆತ್ತೂರು ಅವರು ತನಗೆ ನ್ಯಾಯ ಒದಗಿಸುವಂತೆ ಕೋರಿ ಸಚಿವ ಯು.ಟಿ. ಖಾದರ್ ರಿಗೆ ಮನವಿ ಸಲ್ಲಿಸಿದ್ದಾರೆ.
ಕೇರಳ ಪ್ರವಾಹಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಲಾಗಿದ್ದ ಮೂಢನಂಬಿಕೆಯ ಪೋಸ್ಟ್ ಒಂದಕ್ಕೆ ತಾನು ಪ್ರತಿಕ್ರಿಯಿಸಿದ್ದೆ. ಕಾನೂನಿಗೆ ವಿರುದ್ಧವಲ್ಲದ ಪೋಸ್ಟ್ ಇದಾಗಿದ್ದರೂ ಪೊಲೀಸರು ತನ್ನ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಸ್ವಯಂ ಪ್ರಕರಣ ದಾಖಲಿಸಿ ಸೆಕ್ಷನ್ 153, 505, 507 ನಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಸಿಸಿಬಿ ಪೊಲೀಸರು ತನ್ನನ್ನು ಠಾಣೆಯಲ್ಲಿ ಕೂಡಿ ಹಾಕಿದ್ದರು. ನಂತರ ನ್ಯಾಯಾಲಯದಲ್ಲಿ ಸತ್ಯ ಹೇಳಬಾರದು ಎಂದು ಬೆದರಿಸಲಾಯಿತು ಎಂದವರು ಮನವಿಯಲ್ಲಿ ಆರೋಪಿಸಿದ್ದಾರೆ.
“ನನಗೆ ಅನ್ಯಾಯವಾಗಿದೆ. ಭವಿಷ್ಯದಲ್ಲಿ ಅಧ್ಯಾಪಕನಾಗುವ ಸಿದ್ಧತೆಯಲ್ಲಿದ್ದ ನಾನು ಈಗ ಅನ್ಯಾಯವಾಗಿ ಕ್ರಿಮಿನಲ್ ಆಗುವಂತಾಗಿದೆ. ನಾನು ಈಗ ಮಾನಸಿಕವಾಗಿ ಜರ್ಜರಿತನಾಗಿದ್ದು, ನನ್ನ ಭವಿಷ್ಯ ಡೋಲಾಯಮಾನವಾಗಿದೆ. ಈ ಬಗ್ಗೆ ಮಧ್ಯಪ್ರವೇಶಿಸಿ ನ್ಯಾಯ ದೊರಕಿಸಿ ಕೊಡಬೇಕು” ಎಂದವರು ಮನವಿಯಲ್ಲಿ ತಿಳಿಸಿದ್ದಾರೆ.