ಅಶ್ರಫ್ ಸಾಲೆತ್ತೂರು ಪ್ರಕರಣ: ನ್ಯಾಯ ಒದಗಿಸುವಂತೆ ಡಿವೈಎಫ್ಐಯಿಂದ ಸಚಿವ ಖಾದರ್ ಗೆ ಮನವಿ
ಮಂಗಳೂರು, ಸೆ.12: ಫೇಸ್ ಬುಕ್ ಪೋಸ್ಟ್ ಗೆ ಸಂಬಂಧಿಸಿ ಇತ್ತೀಚೆಗೆ ಬಂಧಿತರಾಗಿದ್ದ ಅಶ್ರಫ್ ಎಂ. ಸಾಲೆತ್ತೂರು ಅವರಿಗೆ ನ್ಯಾಯ ಒದಗಿಸುವಂತೆ ಕೋರಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ದ.ಕ. ಜಿಲ್ಲಾ ಸಮಿತಿ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿತು.
ಅಶ್ರಫ್ ಸಾಲೆತ್ತೂರು ಮೂಢನಂಬಿಕೆಯನ್ನು ಪ್ರಶ್ನಿಸಿ ಫೇಸ್ ಬುಕ್ ನಲ್ಲಿ ಹಾಕಿದ ಬರಹವೊಂದರ ಆಧಾರದಲ್ಲಿ ಮಂಗಳೂರು ಉತ್ತರ ಠಾಣೆ ಪೊಲೀಸರು ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿ, ಬಂಧಿಸಿರುವ ಕುರಿತು ವರದಿಯಾಗಿದ್ದು ಹಾಗು ಠಾಣೆಯಲ್ಲಿ ಹಿಂಸೆ ನೀಡಿರುವುದರ ಕುರಿತು ಅಶ್ರಫ್ ಫೇಸ್ ಬುಕ್ ನಲ್ಲಿ ಬರೆದುದನ್ನೇ ನೆಪಮಾಡಿ ಬಂದರು ಠಾಣಾಧಿಕಾರಿ ಸುರೇಶ್ ಕುಮಾರ್ ನಿಯಮ ಉಲ್ಲಂಘಿಸಿ ಜಾಮೀನು ರದ್ಧತಿಯ ನೋಟೀಸ್ ನೀಡಿರುವುದು, ಬಲವಂತದ ಮುಚ್ಚಳಿಕೆ ಬರೆಸಿರುವುದು ಹಾಗು ಬೆದರಿಸಿರುವ ಬಗ್ಗೆ ತಿಳಿದುಬಂದಿದೆ. ಈ ಕುರಿತು ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಬೇಕು ಮತ್ತು ಅಮಾಯಕ ಅಶ್ರಫ್ ಸಾಲೆತ್ತೂರು ಅವರಿಗೆ ನ್ಯಾಯ ಒದಗಿಸಬೇಕು ಹಾಗು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸಚಿವ ಯು.ಟಿ. ಖಾದರ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.