ಕಾಸರಗೋಡು ಹಿಂದೂ ಐಕ್ಯ ವೇದಿಕೆ ಮುಖಂಡನ ವಿರುದ್ಧ ಕ್ರಮಕ್ಕೆ ಎಸ್ಡಿಪಿಐ ಒತ್ತಾಯ
ಕೋಮು ಪ್ರಚೋದನಾತ್ಮಕ ಭಾಷಣ
ಬಂಟ್ವಾಳ, ಸೆ. 12: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಡಂಬು ಘಟಕದ ಜಂಟಿ ಆಶ್ರಯದಲ್ಲಿ ಕಂಡಬುವಿನಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮದ ಬಗ್ಗೆ ನಿಂದನೆ ಹಾಗೂ ಕೋಮು ಪ್ರಚೋದನಾತ್ಮಕ ಭಾಷಣ ಮಾಡಿದ ಕಾಸರಗೋಡು ಹಿಂದೂ ಐಕ್ಯ ವೇದಿಕೆಯ ಮುಖಂಡ ಪುಷ್ಪರಾಜ್ ಭಟ್ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕು ಎಂದು ಎಸ್ಡಿಪಿಐ ಬಂಟ್ವಾಳ ಕ್ಷೇತ್ರದ ಉಪಾಧ್ಯಕ್ಷ ಖಲಂದರ್ ಪರ್ತಿಪ್ಪಾಡಿ ಒತ್ತಾಯಿಸಿದ್ದಾರೆ.
ಅವರು ಎಸ್ಡಿಪಿಐ ವಿಟ್ಲ ಪಡ್ನೂರು ವಲಯ ಸಮಿತಿ ವತಿಯಿಂದ ಬುಧವಾರ ವಿಟ್ಲದ ಪ್ರೆಸ್ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಗ್ಗೆ ಕ್ರಮಕ್ಕೆ ಒತ್ತಾಯಿಸಿದರು.
ಎಸ್ಡಿಪಿಐ ಪುತ್ತೂರು ಕ್ಷೇತ್ರ ಸಮಿತಿ ಸದಸ್ಯ ಶಾಕೀರ್ ಅಳಕೆಮಜಲು ಮಾತನಾಡಿ, ಇಂತಹ ಒಂದು ಕೀಳು ಮಟ್ಟದ ಭಾಷಣ ಮಾಡಿ ಹಿಂದು ಮುಸ್ಲಿಮರ ನಡುವೆ ದ್ವೇಷ ಉಂಟು ಮಾಡುವ ವ್ಯಕ್ತಿಗಳನ್ನು ಕಾರ್ಯಕ್ರಮದ ಸಂಘಟಕರು ಆಹ್ವಾನಿಸಬಾರದು. ಈ ಬಗ್ಗೆ ಹಿಂದೂ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಈ ಹಿಂದೆ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ, ಶಾರದೋತ್ಸವ ಮೊದಲಾದ ಕಾರ್ಯಗಳಲ್ಲಿ ಮುಸ್ಲಿಮರು ಭಾಗವಹಿಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಅವುಗಳು ಮರೆಯಾಗುತ್ತಿವೆ ಇಂತಹ ಶಕ್ತಿಗಳನ್ನು ಮಟ್ಟ ಹಾಕುವ ಕೆಲಸಗಳು ನಡೆಯಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಡಿಪಿಐ ಮುಖಂಡರಾದ ಮುಹಮ್ಮದ್ ಕಡಂಬು, ಅಝೀಜ್ ಕಡಂಬು, ಸೈರ್ ಪರ್ತಿಪ್ಪಾಡಿ, ರಹೀಂ ವಿಟ್ಲ ಉಪಸ್ಥಿತರಿದ್ದರು.