ಮಂಗಳೂರು: ಅತೀವೃಷ್ಟಿ ಹಾನಿ ಪರಿಶೀಲನೆ ಕೇಂದ್ರದ ತಂಡ ಆಗಮನ
ಮಂಗಳೂರು, ಸೆ. 12: ಕರಾವಳಿಯಲ್ಲಿ ಅತೀವೃಷ್ಟಿಯಿಂದ ಹಾನಿಯಾದ ಹಿನ್ನೆಲೆಯಲ್ಲಿ ಇಂದು ದಕ್ಷಿಣ ಕನ್ನಡ,ಉಡುಪಿ ಹಾಗೂ ಹಾಸನ ಜಿಲ್ಲೆಗಳಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಇಂದು ನಗರದ ಸರ್ಕ್ಯೂಟ್ ಹೌಸ್ಗೆ ಕೇಂದ್ರದ ಐಎಂಸಿಟಿ ತಂಡ ಆಗಮಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹಾಗೂ ಜಿಲ್ಲಾಧಿಕಾರಿ ಸಸಿ ಕಾಂತ್ ಸೆಂಥಿಲ್ಅವರನ್ನು ಭೇಟಿ ಮಾಡಿ ಉಡುಪಿ ಜಿಲ್ಲೆಗೆ ತೆರಳಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅತೀ ವೃಷ್ಟಿಯಿಂದ ಸಾಕಷ್ಟು ಆಸ್ತಿ ಪಾಸ್ತಿ ಹಾನಿಯಾಗಿದೆ.ಮುಖ್ಯವಾಗಿ ಜೀವಹಾನಿ,ಜಾನುವಾರು ನಾಶ, ಮನೆ ಮತ್ತು ಗುಡ್ಡ ಕುಸಿತವಾಗಿದೆ. ಕೃಷಿ ಜಮೀನಿಗೂ ಹಾನಿಯಾಗಿದೆ ಈ ಹಿನ್ನೆಲೆಯಲ್ಲಿ ಸಮಗ್ರ ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿ ನೀಡಲು ಜಿಲ್ಲಾಡಳಿತದಿಂದ ಅಧ್ಯಯನ ತಂಡಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಕೇಂದ್ರದ ಅಧ್ಯಯನ ತಂಡದಲ್ಲಿ ಕೇಂದ್ರ ಆರ್ಥಿಕ ಸಚಿವಾಲಯದ ಉಪ ಕಾರ್ಯದರ್ಶಿ ಭರತೇಂದು ಕುಮಾರ್ ಸಿಂಗ್,ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪ ಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್,ವಿಭಾಗ ಸಂಪರ್ಕ ಮತ್ತು ಹೆದ್ದಾರಿ ಅಧಿಕಾರಿ ಸದಾನಂದ ಬಾಬು ಮೊದಲಾದವರಿದ್ದಾರೆ.ಉಡುಪಿಗೆ ತೆರಳಿ ಅಲ್ಲಿಂದ ಸಂಜೆ ಮಂಗಳೂರಿನ ಅದ್ಯಪಾಡಿ,ಮೂಲ್ಕಿ ಹಾಗೂ ಬಂಟ್ವಾಳದ ಮೂಲಾರ್ಪಟ್ಣ,ವಿಟ್ಲ ಪಡ್ನೂರು, ಕಾಣಿಯೂರು ,ಗುಂಡ್ಯ , ಸುಬ್ರಹ್ಮಣ್ಯ ಮೂಲಕ ಹಾಸನಕ್ಕೆ ತೆರಳಿದ್ದಾರೆ.