ಜೋಡುಮಾರ್ಗ ಜೇಸಿ ಸಪ್ತಾಹದ ಸಮಾರೋಪದಲ್ಲಿ ಡ್ಯಾನ್ಸ್ ಸ್ಪರ್ಧೆ, ಪ್ರಶಸ್ತಿ ಪ್ರದಾನ
ಬಂಟ್ವಾಳ, ಸೆ. 12: ಅಂತಾರಾಷ್ಟೀಯ ವ್ಯಕ್ತಿತ್ವ ವಿಕಸನ ತರಬೇತಿ ಸಂಸ್ಥೆ ಜೋಡುಮಾರ್ಗನೇತ್ರಾವತಿ ಜೇಸೀ ಸಪ್ತಾಹ -2018 ಸೆ. 9 ರಿಂದ ಆರಂಭ ಗೊಂಡಿದ್ದು, 15 ರವರೆಗೆ ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಿವಿಧ ತರಬೇತಿ, ಆರೋಗ್ಯ ಶಿಬಿರ ಹಾಗೂ ಸ್ಪರ್ಧೆಗಳೊಂದಿಗೆ ನಡೆಯುತ್ತಿದೆ ಎಂದು ಅಧ್ಯಕ್ಷೆ ಸವಿತಾ ನಿರ್ಮಲ್ ಹೇಳಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಪ್ತಾಹದ ಹಿನ್ನೆಲೆಯಲ್ಲಿ ಸೆ. 15ರಂದು ಮಧ್ಯಾಹ್ನ 2 ರಿಂದ ಬಿ.ಸಿ.ರೋಡು ರೋಟರಿ ಸಭಾಂಗಣದಲ್ಲಿ "ಪೃಥ್ವಿಯ ಭವಿಷ್ಯ ನಮ್ಮ ಕೈಯಲ್ಲಿ" ಎಂಬ ವಿಷಯದಲ್ಲಿ ಚಿತ್ರ ಕಲಾ ಸ್ಪರ್ಧೆಯನ್ನು 1ರಿಂದ 4, 5 ರಿಂದ 7 ಹಾಗೂ 8 ರಿಂದ 10ನೆ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿದೆ. ಸಂಜೆ 3 ಗಂಟೆಗೆ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಾನಪದ ಶೈಲಿಯ ನೃತ್ಯ ಸ್ಪರ್ಧೆ ಹಾಗೂ ಹೈಸ್ಕೂಲ್ ವಿಭಾಗದಲ್ಲಿ ಫಿಲ್ಮ್ ಡಾನ್ಸ್ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯು ಗರಿಷ್ಠ 6 ಜನರ ತಂಡದ ಗುಂಪು ವಿಭಾಗದಲ್ಲಿ ನಡೆಯಲಿದ್ದು ಪ್ರಥಮ 3ಸಾವಿರ ದ್ವಿತೀಯ 2ಸಾವಿರ ಹಾಗೂ ತೃತೀಯ 1 ಸಾವಿರ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ಭಾಗವಹಿಸಿದ ವಿದ್ಯಾರ್ಥಿ ಗಳಿಗೆ ನೀಡಲಾಗುವುದು. ಇದೇ ಸಂದರ್ಭ, ಪ್ರೊಟೋಜೆನಿಕ್ ಬೇಬಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, 5 ವರ್ಷದ ಒಳಗಿನ ಮಕ್ಕಳಿಗೆ 6*4 ಗಾತ್ರದ ಕಲರ್ ಭಾವಚಿತ್ರವನ್ನು ಮಗುವಿನ ಹೆಸರು, ಪ್ರಾಯ, ಪೊಷಕರ ಹೆಸರು, ವಿಳಾಸ ಮೊಬೈಲ್ ಸಂಖ್ಯೆಯೊಂದಿಗೆ ಸೆ. 14ರ ಮೊದಲು ಪಿಂಕಿ ಸ್ಟುಡಿಯೊ ಪದ್ಮಾ ಕಾಂಪ್ಲೆಕ್ಸ್ ಬಿಸಿರೋಡ್ ಇಲ್ಲಿಗೆ ತಲುಪಿಸಬಹುದು ಎಂದು ಮಾಹಿತಿ ನೀಡಿದರು.
ಜೇಸಿ ಸಪ್ತಾಹದ ಸಮಾರೋಪದಲ್ಲಿ ಬಿ.ಸಿ.ರೋಡಿನ ರೋಟರಿ ಕ್ಲಬ್ ಹಾಲ್ನಲ್ಲಿ ಸಂಜೆ 6.30ಕ್ಕೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸಹಿತ ಗಣ್ಯರು ಭಾಗವಹಿಸುವರು. ಈ ಸಂದರ್ಭ ರವೀಂದ್ರ ಕುಕ್ಕಾಜೆ ಅವರಿಗೆ ಕಮಲಪತ್ರ, ತೆರೆಮರೆಯ ಸಾಧಕ ಡಿ.ಎ.ರೆಹ್ಮಾನ್ ಪಟೇಲ್ ಅವರಿಗೆ ಸನ್ಮಾನ , ಶ್ರೀನಿವಾಸ ಮೇಲ್ಕಾರ್ ಅವರಿಗೆ ಸಾಧನಾಶ್ರೀ ಪ್ರಶಸ್ತಿ, ಹಾಗೂ ಡಾ. ರಾಘವೇಂದ್ರ ಹೊಳ್ಳ ಅವರಿಗೆ ಉದಯೋನ್ಮುಖ ಯುವ ಪ್ರಶಸ್ತಿ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪೂರ್ವಾಧ್ಯಕ್ಷ ಉಮೇಶ್ ನಿರ್ಮಲ್, ನವೀನ್ ಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.