2 ವರ್ಷದೊಳಗೆ ಅಡ್ಯಾರ್ - ಹರೇಕಳ ಕಿಂಡಿ ಅಣೆಕಟ್ಟು ನಿರ್ಮಾಣ: ಸಚಿವ ಪುಟ್ಟರಾಜು
ಮಂಗಳೂರು, ಸೆ. 14: ಅಡ್ಯಾರ್ - ಹರೇಕಳ ನಡುವಿನ ಕಿಂಡಿ ಅಣೆಕಟ್ಟು ಸೇತುವೆಯನ್ನು ಟೆಂಡರ್ ಪ್ರಕ್ರಿಯೆ ನಡೆಸಿದ 2 ವರ್ಷದೊಳಗೆ ನಿರ್ಮಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಪುಟ್ಟರಾಜು ತಿಳಿಸಿದ್ದಾರೆ.
ಹರೇಕಳ-ಅಡ್ಯಾರ್ ಮಧ್ಯೆ ಸೇತುವೆ ಸಂಪರ್ಕ ಕಲ್ಪಿಸುವ ಸಲುವಾಗಿ ಶುಕ್ರವಾರ ನೇತ್ರಾವತಿ ತೀರದ ಹರೇಕಳ ಪಾವೂರು ಕಡವಿನ ಬಳಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಸೇತುವೆ ನಿರ್ಮಾಣವು ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದೆ. ಸುಮಾರು 174 ಕೋ.ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುವುದು. ಇದರಿಂದ ಜಮೀನು ಕಳಕೊಳ್ಳುವವರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದರು.
ಕಿಂಡಿ ಅಣೆಕಟ್ಟು ಮೂಲಕ ಸಂಗ್ರಹಿಸಲಾಗುವ ನೀರನ್ನು ಕೃಷಿ ಉಪಯೋಗಿ ಮತ್ತು ಕುಡಿಯಲು ಬಳಸಲಾಗುವುದು ಎಂದು ಸಚಿವ ಪುಟ್ಟರಾಜು ತಿಳಿಸಿದರು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಮತ್ತಿತರರು ಉಪಸ್ಥಿತರಿದ್ದರು.
Next Story