ಸೆ.16ರಂದು ರಾಷ್ಟ್ರಮಟ್ಟದ ಸೀನಿಯರ್ ಭರತನಾಟ್ಯ ಸ್ಪರ್ಧೆ
ಉಡುಪಿ, ಸೆ.14: ಹೆಜ್ಜೆಗೆಜ್ಜೆ ಉಡುಪಿ ಮಣಿಪಾಲ ಇದರ ರಜತ ಮಹೋತ್ಸವದ ಪ್ರಯುಕ್ತ ಪರ್ಯಾಯ ಪಲಿಮಾರು ಮಠ ಉಡುಪಿ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ರಾಷ್ಟ್ರಮಟ್ಟದ ಸೀನಿಯರ್ ಭರತನಾಟ್ಯ(16ರಿಂದ 25ವರ್ಷ ವಯೋಮಿತಿ) ಸ್ಪರ್ಧೆಯನ್ನು ಸೆ.16ರಂದು ರಾಜಾಂಗಣದಲ್ಲಿ ಏರ್ಪ ಡಿಸಲಾಗಿದೆ.
ಸ್ಪರ್ಧೆಯಲ್ಲಿ ದೇಶದಾದ್ಯಂತದಿಂದ ಸುಮಾರು 40ಕ್ಕೂ ಅಧಿಕ ಸ್ಪರ್ಧಾರ್ಥಿ ಗಳು ಭಾಗವಹಿಸಲಿರುವರು. ಪ್ರತಿಯೊಬ್ಬರು ನಾಯಕ ನಾಯಕಿ ಭಾವವುಳ್ಳ ಪದವರ್ಣವನ್ನು ನರ್ತಿಸಲಿರುವರು ಎಂದು ರಜತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷೆ ವಿದುಷಿ ಯಶಾ ರಾಮಕೃಷ್ಣ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಪ್ರಥಮ ಬಹುಮಾನ ಪಡೆದವರಿಗೆ ಚಿನ್ನದ ಪದಕ ಮತ್ತು ಪ್ರಶಸ್ತಿಯನ್ನು ನೀಡ ಲಾಗುವುದು. ದ್ವಿತೀಯ ಸ್ಥಾನ ವಿಜೇತರಿಗೆ 8000ರೂ., ತೃತೀಯ 5000ರೂ. ನಗದು ಹಾಗೂ ಐದು ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಸಂಸ್ಥೆಯ ನೃತ್ಯಾಂಜಲಿ ನೃತ್ಯ ಸರಣಿಯ ಏಳನೆ ಕಾರ್ಯಕ್ರಮವನ್ನು ಸೆ.22ರಂದು ಸಂಜೆ 7ಗಂಟೆಗೆ ಬೆಂಗಳೂರಿನ ನೃತ್ಯ ಕಲಾವಿದೆ ವಿದುಷಿ ಐಶ್ವರ್ಯ ನಿತ್ಯಾನಂದ ನಡೆಸಿಕೊಡಲಿರುವರು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಂಜನಾ ಸುಧಾಕರ್, ನಾಗಶ್ರೀ, ಶ್ವೇತಾ ಉಪಸ್ಥಿತರಿದ್ದರು.