ಇತರ ರೋಗಿಗಳೊಂದಿಗೆ ವಿಕಲ ಚೇತನರ ತಪಾಸಣೆ: ಕಾದು ಸುಸ್ತಾದ ಆರೋಪ
ಪುತ್ತೂರು, ಸೆ. 14: ವಿಕಲಚೇತನರಿಗಾಗಿ ಪ್ರತಿ ತಿಂಗಳ 2ನೇ ಶುಕ್ರವಾರ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣಾ ಶಿಬಿರ ನಡೆಸಲಾಗುತ್ತಿದ್ದು, ಅದರಂತೆ ಇಂದು ತಪಾಸಣೆಗೆ ಆಗಮಿಸಿದ ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡದೆ ಇತರ ರೋಗಿಗಳೊಂದಿಗೆ ಅವರನ್ನು ತಪಾಸಣೆ ನಡೆಸಿದ ಕಾರಣ ಬೆಳಗ್ಗಿನಿಂದ ಸಂಜೆಯ ತನಕ ಕಾದು ಸುಸ್ತಾದರು ಎನ್ನಲಾದ ಘಟನೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಅಂಗವಿಕಲರನ್ನು ಉಳಿದ ರೋಗಿಗಳ ಜತೆ ಸೇರ್ಪಡೆಗೊಳಿಸಿ ತಪಾಸಣಾ ಕ್ರಮ ಅನುಸರಿಸಿದ ಕಾರಣ ನಡೆದಾಡಲು ಸಾಧ್ಯವಿಲ್ಲದ ಹಾಗೂ ಅಸಹಾಯಕ ಸ್ಥಿತಿಯಲ್ಲಿದ್ದ ಅಂಗವಿಕಲರು ಆಸ್ಪತ್ರೆಯ ವರಾಂಡದಲ್ಲೇ ಉಳಿದು ಗೋಳಿಡುವ ಪರಿಸ್ಥಿತಿ ನಿರ್ಮಾಣವಾಯಿತು. ನಾವು ಬೆಳಿಗ್ಗಿನ ವೇಳೆಯೇ ಆಸ್ಪತ್ರೆಗೆ ಬಂದಿದ್ದೇವೆ. ತಪಾಸಣೆ ನಡೆಸುವ ವೈದ್ಯರ ಕೊಠಡಿಯೊಳಗೆ ಉಳಿದ ರೋಗಿಗಳೇ ನುಗ್ಗುತ್ತಿರುವುದರಿಂದ ನಮಗೆ ಪ್ರವೇಶಿಸಲು ನಮಗೆ ಅವಕಾಶವೇ ಸಿಕ್ಕಿಲ್ಲ. ನಾವು ಕುಳಿತಲ್ಲಿಯೇ ಬಾಕಿಯಾಗಿದ್ದೇವೆ ಎಂದು ಕೆಲವು ಮಂದಿ ಅಂಗವಿಕಲರು ಮಾಧ್ಯಮದ ಮುಂದೆ ತಮ್ಮ ನೋವು ತೋಡಿಕೊಂಡರು.