ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ 14ನೇ ಧರ್ಮಾಧ್ಯಕ್ಷರಾಗಿ ಅತೀ ವಂ.ಡಾ.ಪೀಟರ್ ಪಾವ್ಲ್ ಸಲ್ದಾನ ದೀಕ್ಷೆ
ಮಂಗಳೂರು, ಸೆ. 15: ನಗರದ ಪುರಾತನ ರೊಝಾರಿಯೋ ಕೆಥಡ್ರಲ್ ನಲ್ಲಿ ಶನಿವಾರ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ನೂತನ ಬಿಷಪ್ ರೆ.ಡಾ. ಪೀಟರ್ ಪಾವ್ಲ್ ಸಲ್ದಾನ ಅವರು ಅಧಿಕಾರ ಸ್ವೀಕರಿಸಿದರು.
ಮಂಗಳೂರು ಧರ್ಮ ಪ್ರಾಂತ್ಯದಲ್ಲಿ 22 ವರ್ಷಗಳ ಬಳಿಕ ನಡೆದ ಈ ಐತಿಹಾಸಿಕ ಸಮಾರಂಭಕ್ಕೆ ಬೆಂಗಳೂರು, ಗೋವಾದ ಆರ್ಚ್ ಬಿಷಪ್ ಗಳು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಬಿಷಪ್ ಗಳು, ನೂರಾರು ಧರ್ಮ ಗುರುಗಳು, ಧರ್ಮ ಭಗಿನಿಯರು, ಸಹಸ್ರಾರು ಕ್ರೈಸ್ತ ಬಾಂಧವರು, ಗಣ್ಯರು, ಸಾರ್ವಜನಿಕರು ಸಾಕ್ಷಿಯಾದರು.
ವಿಶೇಷ ಬಲಿಪೂಜೆ ಸಹಿತ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ನೂತನ ಬಿಷಪ್ ಗೆ ನಿರ್ಗಮನ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಹಾಗೂ ವೇದಿಕೆಯಲ್ಲಿದ್ದ ಆರ್ಚ್ ಬಿಷಪ್ ಗಳು ಮತ್ತು ಬಿಷಪರು ದೀಕ್ಷೆ ವಿಧಿ ವಿಧಾನ ನೆರವೇರಿಸಿದರು.
ರೋಮ್ ನ ಪೋಪ್ ಪ್ರತಿನಿಧಿ ಮೊನ್ಸಿಂಜರ್ ಝೇವಿಯರ್ ಡಿ. ಫೆರ್ನಾಂಡಿಸ್ ರವರು ಬಿಷಪ್ ನೇಮಕಾತಿಯ ಲ್ಯಾಟಿನ್ ಭಾಷೆಯ ಆದೇಶ ಪತ್ರ ವಾಚಿಸಿದರು. ಫಾ. ಜೋಸೆಫ್ ಮಾರ್ಟಿನ್ ಇಂಗ್ಲಿಷ್ ನಲ್ಲಿ, ಫಾ. ವಿಕ್ಟರ್ ಡಿಮೆಲ್ಲೊ ಕೊಂಕಣಿಯಲ್ಲಿ ಆದೇಶವನ್ನು ಭಾಷಾಂತರಿಸಿದರು.