ಉಡುಪಿಯಲ್ಲಿ ಮೀನಿನಂಗಡಿ ಸ್ಥಾಪನೆಗೆ ಅವಕಾಶ ನೀಡಲ್ಲ: ಬೇಬಿ ಸಾಲ್ಯಾನ್
ಉಡುಪಿ, ಸೆ.15: ಮೀನುಗಾರ ಮಹಿಳೆಯರು ತಮ್ಮ ಮೀನುವ್ಯಾಪಾರ ಕುಲಕಸುಬನ್ನು ಅವಲಂಬಿಸಿಕೊಂಡು ಸಾಮಾಜಿಕ ಮತ್ತು ಆರ್ಥಿಕವಾಗಿ ಸದೃಢರಾಗಬೇಕು. ಉಡುಪಿ ತಾಲೂಕಿನ 30 ಮೀನು ಮಾರುಕಟ್ಟೆಗಳ ಸಹಕಾರ ದೊಂದಿಗೆ ಮೀನುಮಾರಾಟಗಾರರ ಸಹಕಾರಿ ಸಂಘವನ್ನು ಸ್ಥಾಪಿಸಲಾ ಗಿದ್ದು, ಯಾವುದೇ ರೀತಿಯ ಮೀನಿನಂಗಡಿಗಳನ್ನು ಸ್ಥಾಪಿಸಲು ಸಂಘ ಬಿಡುವುದಿಲ್ಲ ಎಂದು ಉಡುಪಿ ಮೀನು ಮಾರಾಟಗಾರರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಬೇಬಿ ಎಚ್.ಸಾಲ್ಯಾನ್ ತಿಳಿಸಿದ್ದಾರೆ.
ಉಡುಪಿ ಕಿನ್ನಿಮೂಲ್ಕಿಯ ವೀರಭದ್ರ ದೇವಸ್ಥಾನದ ಸಭಾಭವನ ಸಭಾಂಗಣ ದಲ್ಲಿ ಶನಿವಾರ ನಡೆದ ಮೀನು ಮಾರಾಟಗಾರರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಎಂಟನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಉಡುಪಿ ಮಹಾಲಕ್ಷ್ಮೀ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಯಶ್ ಪಾಲ್ ಎ.ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಸದಸ್ಯರ 54 ಮಂದಿ ಮಕ್ಕಳಿಗೆ 75,000ರೂ. ವಿದ್ಯಾರ್ಥಿ ವೇತನ, ದೊಡ್ಡಣಗುಡ್ಡೆ ಮೀನು ಮಾರುಕಟ್ಟೆಯ ಬೇಬಿ ಮೈಂದನ್ ಗುಜ್ಜರಬೆಟ್ಟು ಅವರಿಗೆ 10,000 ರೂ. ಆರೋಗ್ಯ ನೆರವು ಹಾಗೂ ಮಡಿಕೇರಿ ಮತ್ತು ಕೇರಳ ಜಲಾವೃತ ಸಂತ್ರಸ್ತರಿಗೆ ದೇಣಿಗೆಯನ್ನು ನೀಡಲಾಯಿತು. ಪಿಎಚ್ಡಿ ಪದವಿ ಪಡೆದ ಬಬಿತ ಶಶಿಕಲ ಸುವರ್ಣ ಉಚ್ಚಿಲ, ಕರಾಟೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಮಾಣಿಕ್ ಸುವರ್ಣ ಕಟಪಾಡಿ ಅವರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷೆ ಜಯಂತಿ ಗುರುದಾಸ್ ಬಂಗೇರ, ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಫೇಡರೇಶನ್ ನಿರ್ದೇಶಕ ಮಂಜುನಾಥ್ ಎಸ್.ಕೆ, ನಿರ್ದೇಶಕರುಗಳಾದ ಸುರೇಶ್ ಬಿ.ಕುಂದರ್, ನಾರಾಯಣ ಪಿ.ಕುಂದರ್, ಹರೀಶ್ ಜಿ.ಕರ್ಕೇರ, ಲಕ್ಷ್ಮೀ ಆನಂದ್, ಸರೋಜ ಕಾಂಚನ್, ಸುನೀತ ಜೆ.ಬಂಗೇರ, ಇಂದಿರಾ ವಿ.ಕಾಂಚನ್, ಭಾನುಮತಿ ಕಾಂಚನ್, ಜಯಂತಿ ಎನ್.ಕೋಟ್ಯಾನ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಕಾಶ ಸುವಣರ್ ಕಟಪಾಡಿ ಸ್ವಾಗತಿಸಿ, ವಂದಿಸಿದರು.