ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ; ದೂರು
ಮಂಗಳೂರು, ಸೆ.15: ತಾನು ಬರೆದ ಲೇಖನವನ್ನು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ಈ ಬಗ್ಗೆ ಕೆಲವರು ಅವಹೇಳನಕಾರಿ ಕಮೆಂಟ್ ಹಾಕಿ ಮಾನಹಾನಿ ಮತ್ತು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸುದ್ದಿ ಟಿವಿ ಕನ್ನಡ ವಾಹಿನಿಯ ವರದಿಗಾರ ಇರ್ಷಾದ್ ಉಪ್ಪಿನಂಗಡಿ ಡಿಸಿಪಿ ಉಮಾ ಪ್ರಶಾಂತ್ ಅವರಿಗೆ ಶನಿವಾರ ದೂರು ಸಲ್ಲಿಸಿದ್ದಾರೆ.
ಫೇಸ್ಬುಕ್ ಹಾಗೂ ಕನ್ನಡ ಅಂತರ್ಜಾಲ ಮಾಧ್ಯಮಗಳಲ್ಲೂ ಲೇಖನಗಳು ಹಾಗೂ ಅಭಿಪ್ರಾಯ ಸ್ಟೇಟಸ್ಗಳನ್ನು ಆಗಾಗ ತಾನು ಹಾಕುತ್ತೇನೆ. ಇತ್ತೀಚೆಗೆ ಅಂತರ್ಜಾಲ ವೆಬ್ಸೈಟ್ವೊಂದರಲ್ಲಿ ಬರೆದ ಲೇಖನವನ್ನು ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದೆ. ಇದಕ್ಕೆ ಸಂಬಂಧಿಸಿದಂತೆ ಶಾಕಿರ್ ಹಕ್ ನೆಲ್ಯಾಡಿ, ಎಂ.ಜಝೀಲ್ ಮೋನು ಯಾನೆ ಜಲೀಲ್ ಕಲರಾ ಹಾಗೂ ಅನ್ಸಾರ್ ರಾಯಲ್ ತಂಡ ಅವಹೇಳನಕಾರಿ, ಆಧಾರ ರಹಿತ ಮಾಹಿತಿಗಳಿಂದ ಕೂಡಿದ ಕಮೆಂಟ್ಗಳನ್ನು ಹಾಕಿ ವೈಯಕ್ತಿಕ ನಿಂದನೆ ಹಾಗೂ ಮಾನಹಾನಿ ಮಾಡಿದ್ದಾರೆ. ಈ ಮೂಲಕ ತನ್ನ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಯತ್ನ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಭಾಗವಹಿಸುವಿಕೆಯ ಪರವಾಗಿ ತಾನು ಹಾಕಿದ ಸ್ಟೇಟಸ್ವೊಂದರಲ್ಲಿ ಕಮೆಂಟ್ ಮಾಡಿದ ಸಲ್ಮಾನ್ ಸಲ್ಲು ಎಂಬಾತ ತನಗೆ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿದರು.
ಈ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವವರ ವಿರುದ್ಧ ಈ ರೀತಿ ಕೆಟ್ಟ ಪದ ಬಳಕೆ ಹಾಗೂ ನಿಂದನೆ ಮಾಡುವಂತಹ ಕಮೆಂಟ್ಗಳನ್ನು ಹಾಕಿ ಸಾಮಾಜಿಕ ಸ್ವಾಸ್ಥ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಡಿಸಿಪಿ ಉಮಾ ಪ್ರಶಾಂತ್ ಅವರಿಗೆ ದೂರು ನೀಡಿದ್ದಾರೆ.