ಬಡಗಬೆಟ್ಟು ಸೊಸೈಟಿಯ ಡಿವಿಡೆಂಡ್ನಲ್ಲಿ ಶೇ.5ರಷ್ಟು ಪಾಲು ಕೊಡಗು ನೆರೆ ಪರಿಹಾರ ನಿಧಿಗೆ
ಉಡುಪಿ, ಸೆ.16: ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಶತಮಾನೋತ್ಸವದ ಅಂಗವಾಗಿ ಸದಸ್ಯರಿಗೆ ಶೇ.20 ಡಿವಿಡೆಂಡ್ ಘೋಷಿಸಿದ್ದು, ಅದರಲ್ಲಿ ಶೇ.5ರಷ್ಟು ಪಾಲನ್ನು ಕೊಡಗು ನೆರೆ ಪರಿಹಾರ ನಿಧಿಗೆ ನೀಡುವ ಬಗ್ಗೆ ಇಂದು ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ನಿರ್ಧರಿಸಲಾಯಿತು.
ಡಿವಿಡೆಂಡ್ನ ಶೆ.5 ಪಾಲಿನಿಂದ ಸಂಗ್ರಹವಾದ 19ಲಕ್ಷ ರೂ. ಸೇರಿದಂತೆ ಸಂಘದಿಂದ ಒಟ್ಟು 20ಲಕ್ಷ ರೂ. ದೇಣಿಗೆಯನ್ನು ಕೊಡಗು ನೆರೆ ಪರಿಹಾರ ನಿಧಿಗೆ ನೀಡುವುದಾಗಿ ಸಂಘದ ಅಧ್ಯಕ್ಷ ಸಂಜೀವ ಕಾಂಚನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು.
ಮುಖ್ಯ ಅತಿಥಿಯಾಗಿ ಉಡುಪಿ ಸಹಕಾರ ಇಲಾಖೆಯ ಉಪನಿಬಂಧಕ ಪ್ರವೀಣ್ ನಾಯಕ್ ಮಾತನಾಡಿ, ರಿಸರ್ವ್ ಬ್ಯಾಂಕ್ ಮೈನರ್ ಬ್ಯಾಂಕ್ ಎಂಬ ಹೊಸ ಚಿಂತನೆಯನ್ನು ಹೊಂದಿದ್ದು, ಈ ರೀತಿಯ ಮೈನರ್ ಬ್ಯಾಂಕ್ ಗಳಾಗಿ ಸೊಸೈಟಿ ಬೆಳೆಯಬೇಕು ಎಂದು ಹೇಳಿದರು.
ವಾರ್ಷಿಕ ವರದಿ ಮತ್ತು ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಸಂಘವು ಒಟ್ಟು 29,009 ಸದಸ್ಯರಿಂದ 4.01 ಕೋಟಿ ಪಾಲು ಬಂಡವಾಳ ಹಾಗೂ 259.50 ಕೋಟಿ ಠೇವಣಿ ಸಂಗ್ರಹಿಸಿದ್ದು, 245.24 ಕೋಟಿ ಹೊರ ಬಾಕಿ ಸಾಲ ಹೊಂದಿದೆ. ವರದಿ ಸಾಲಿನಲ್ಲಿ ಸಂಘವು 5ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಸೇನಾ ಧಿಕಾರಿ ದಿನೇಶ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಆಡಳಿತ ಮಂಡಳಿ ಸದಸ್ಯರಾದ ಪುರುಷೋತ್ತಮ ಪಿ.ಶೆಟ್ಟಿ, ಹಾಜಿ ಸಯ್ಯದ್ ರಜಾಕ್, ವಸಂತ ಕಾಮತ್, ವಿನಯ ಕುಮಾರ್ ಟಿ.ಎ., ಜಯಾ ನಂದ ಸಿ. ಮೈಂದನ್, ಪದ್ಮನಾಭ ನಾಯಕ್, ಜಯ ಶೆಟ್ಟಿ, ಗಾಯತ್ರಿ ಎಸ್. ಭಟ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ಎಲ್.ಉಮಾನಾಥ್ ವಂದಿಸಿದರು.