ವಾಮಂಜೂರು: ಲಾರಿಗಳ ಬ್ಯಾಟರಿ ಕಳವು ಪ್ರಕರಣ; ಓರ್ವ ಆರೋಪಿಯ ಸೆರೆ
ಮಂಗಳೂರು, ಸೆ.17: ವಾಮಂಜೂರು ಪರಿಸರದಲ್ಲಿ ನಿಲ್ಲಿಸಲಾಗಿದ್ದ ಲಾರಿಗಳಿಂದ ಬ್ಯಾಟರಿಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ವಾಮಂಜೂರು ನಿವಾಸಿ ಅಝರುದ್ದೀನ್(26) ಬಂಧಿತ ಆರೋಪಿಯಾಗಿದ್ದಾನೆ. ಇನ್ನೋರ್ವ ಆರೋಪಿ ವಾಮಂಜೂರು ನಿವಾಸಿ ಆರಿಫ್(24) ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಕನಾಡಿ ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್ಸೈ ಹಾಗೂ ಸಿಬ್ಬಂದಿ ಜಪ್ಪಿನಮೊಗರುವಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಸ್ಕಾರ್ಪಿಯೊ ಕಾರೊಂದನ್ನು ತಪಾಸಣೆ ನಡೆಸಿದಾಗ ಲಾರಿಗಳ ಬ್ಯಾಟರಿ ಹಾಗೂ ಕಾಂಕ್ರಿಟ್ ಕಬ್ಬಿಣದ ಶೀಟ್ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದ ಸುಮಾರು 40 ಸಾವಿರ ರೂ. ಮೌಲ್ಯದ ಬ್ಯಾಟರಿ ಹಾಗೂ ಕಾಂಕ್ರಿಟ್ ಶೀಟ್ಗಳನ್ನು ಹಾಗೂ ಸ್ಕಾರ್ಪಿಯೊ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ 4.50 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಅಝರ್ ವಿರುದ್ಧ ಈಗಾಗಲೇ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವೊಂದು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.