ಅಳಕೆ: ಉಚಿತ ಯೋಗ ಶಿಬಿರ ಸಮಾರೋಪ
ಮಂಗಳೂರು, ಸೆ.17: ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ್ ಟ್ರಸ್ಟ್ ವತಿಯಿಂದ ನಗರದ ಅಳಕೆ ಗುಜರಾತಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗಗುರು ಎಂ.ಜಗದೀಶ ಶೆಟ್ಟಿಯವರ 145ನೇ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಅನಿವಾಸಿ ಉದ್ಯಮಿ, ಸಮಾಜ ಸೇವಕ ಮೂಡಂಬೈಲ್ ರವಿ ಶೆಟ್ಟಿ ಅವರಿಗೆ ‘ಕಡಲಾಚೆಯ ಕಣ್ಮಣಿ’ ಬಿರುದು ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ‘ಸದಾಶಯ’ ತ್ರೈಮಾಸಿಕದ ಪ್ರಧಾನ ಸಂಪಾದಕ ಮತ್ತು ಯಕ್ಷಗಾನ ಅರ್ಥಧಾರಿ ಪ್ರೊ.ಭಾಸ್ಕರೈ ಕುಕ್ಕುವಳ್ಳಿ, ’ಹೊರನಾಡಿನಲ್ಲಿರುವ ತುಳು ಕನ್ನಡಿಗರು ತಮ್ಮ ತಾಯ್ನಿಡಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದು ವಿವಿಧ ಸೇವಾ ಕಾರ್ಯಗಳ ಮೂಲಕ ಹುಟ್ಟೂರಿನವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದಾರೆ. ಅಂಥವರಲ್ಲಿ ಎಂ.ರವಿ ಶೆಟ್ಟಿ ಪ್ರಮುಖರು ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಎಸ್.ಡಿ.ಎಂ. ಉದ್ಯಮಾಡಳಿತ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ದೇವರಾಜ್ ಅಭಿನಂದನಾ ಭಾಷಣ ಮಾಡಿದರು. ಯೋಗ ಗುರು ಎಂ.ಜಗದೀಶ್ ಶೆಟ್ಟಿ ಬಿಜೈ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೂಡಂಬೈಲ್ ರವಿ ಶೆಟ್ಟಿ, ತನಗೆ ನೀಡಿದ ಬಿರುದು, ಸಮ್ಮಾನಗಳು ಕೊಲ್ಲಿ ರಾಷ್ಟ್ರದಲ್ಲಿರುವ ತುಳುವರಿಗೆ ನೀಡಿರುವ ಶ್ರೇಷ್ಠ ಗೌರವ. ಇದು ತನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಇದಕ್ಕೂ ಮುನ್ನ ಎಂ.ರವಿ ಶೆಟ್ಟಿ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಜಯಾ ಬ್ಯಾಂಕಿನ ನಿವೃತ್ತ ಪ್ರಬಂಧಕ ನಿರ್ಮಲ್ ಕುಮಾರ್ ಶೆಟ್ಟಿ, ಮಾಜಿ ಸೈನಿಕ ನಾರಾಯಣ್ ಮತ್ತು ಹಂಪನಕಟ್ಟೆ ಸಿಂಡಿಕೇಟ್ ಬ್ಯಾಂಕಿನ ಪ್ರಬಂಧಕ ಮಾಧವ ರೈ ಅಮೈ ಮುಖ್ಯ ಅತಿಥಿಗಳಾಗಿದ್ದರು.
ಪತಂಜಲಿ ಯೋಗ ಸಮಿತಿಯ ಸುಧಾಕರ ಕಾಮತ್ ಸ್ವಾಗತಿಸಿದರು. ಸುಬ್ರಾಯ ನಾಯಕ್ ವಂದಿಸಿದರು. ಪತ್ರಕರ್ತೆ ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿಗಳಾದ ಭಾರತಿ ಶೆಟ್ಟಿ, ರಾಧಿಕಾ ಕಾಮತ್, ಸುನೀತಾ, ಲಕ್ಷ್ಮೀ ಭಟ್ ಮತ್ತು ಊರ್ಮಿಳಾ ಸಹಕರಿಸಿದರು.