ವಿಶ್ವಕರ್ಮ ಸಮುದಾಯದ್ದು ಪರಿಶ್ರಮದ ಜೀವನ: ರಘುಪತಿ ಭಟ್
ಉಡುಪಿ, ಸೆ.17: ಶ್ರಮಜೀವಿಗಳಾಗಿರುವ ವಿಶ್ವಕರ್ಮ ಸಮುದಾಯದವ ರದ್ದು ಪರಿಶ್ರಮದ ಜೀವನ ಆಗಿದೆ. ವಿಶ್ವಕರ್ಮ ಜಯಂತಿಯು ಕೇವಲ ಸಾಮಾಜಿಕವಾಗಿರದೆ ಧಾರ್ಮಿಕ ಕಾರ್ಯಕ್ರಮವೂ ಆಗಿರಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕುಂಜಿಬೆಟ್ಟು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಲಾದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ವಿಶ್ವಕರ್ಮರ ಬಗ್ಗೆ ಮುಂದಿನ ತಲೆಮಾರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಸರಕಾರ ಈ ಜಯಂತಿ ಕಾರ್ಯಕ್ರಮವನ್ನು ಆಚರಿಸುತ್ತಿದ್ದು, ಇದರಲ್ಲಿ ಯುವ ಸಮುದಾಯ ಹಾಗೂ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳ ಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಿ ದರು. ಈ ಸಂದರ್ಭದಲ್ಲಿ ಸಮುದಾಯದ ಸಾಧಕರುಗಳಾದ ಜನಾರ್ದನ ಆಚಾರ್ಯ ಪರ್ಕಳ, ಅನಂತಯ್ಯ ಆಚಾರ್ಯ ಪೆರ್ಡೂರು, ನೀಲಯ್ಯ ಆಚಾರ್ಯ ನಿಟ್ಟೆ, ಪರಮೇಶ್ವರ ಆಚಾರ್ಯ ಬಸ್ರೂರು, ಶಶಿಕಲಾ ಎಂ. ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಹೆಬ್ರಿಯ ವಿದ್ವಾನ್ ಚಂದ್ರಕಾಂತ ಪುರೋಹಿತ ವಿಶ್ವಕರ್ಮರ ಕುರಿತು ಉಪ ನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ರಾಷ್ಟ್ರೀಯ ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ದಿವಾಕರ್ ವಿ.ಆಚಾರ್ಯ, ದ.ಕ. ಮತ್ತು ಉಡುಪಿ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಯು.ಕೆ.ಎಸ್.ಸೀತಾರಾಮ ಆಚಾರ್ಯ, ಅಪರ ಜಿಲ್ಲಾಧಿ ಕಾರಿ ವಿದ್ಯಾ ಕುಮಾರಿ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ನಗರಸಭೆ ಸದಸ್ಯೆ ಭಾರತಿ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಚಂದ್ರ ಶೇಖರ್ ಸ್ವಾಗತಿಸಿದರು. ಬಿ.ವಿ.ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.