ಆಳ್ವಾಸ್ ಸಹಕಾರ ಸಂಘ ನಿ. ವಾರ್ಷಿಕ ಮಹಾಸಭೆ: ಶೇ.15 ಡಿವಿಡೆಂಡ್ ಘೋಷಣೆ
ಮೂಡುಬಿದಿರೆ, ಸೆ. 18: ಆಳ್ವಾಸ್ ಸಹಕಾರ ಸಂಘ 2017 -18 ನೇ ಸಾಲಿನಲ್ಲಿ 16.09 ಕೋಟಿ ರೂ. ಠೇವಣಿಯನ್ನು ಹೊಂದಿದ್ದು 14.93 ಕೋಟಿ ಸಾಲ ನೀಡಿದ್ದು 38.87 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 15 ಡಿವಿಡೆಂಡ್ ನೀಡುವುದಾಗಿ ಸಂಘದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.
ವಿದ್ಯಾಗಿರಿಯ ವಿ.ಎಸ್ ಆಚಾರ್ಯ ಸಭಾಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುವಂತೆ ಆರ್ಟಿಜಿಎಸ್, ನೆಪ್ಟ್, ಎಸ್ಎಂಎಸ್ ಸೇವೆಯನ್ನು ನೀಡಲಾಗಿದ್ದು ಮುಂದಿನ ವರ್ಷಗಳಲ್ಲಿ ಇ.ಸ್ಟಾಂಪಿಂಗ್, ಲಾಕರ್, ಎಟಿಎಂ ಸೇವೆಯನ್ನು ನೀಡುವುದರೊಂದಿಗೆ ಒಟ್ಟು ವ್ಯವಹಾರವನ್ನು 50 ಕೋಟಿಗೆ ವಿಸ್ತರಿಸುವ ಗುರಿ ಹೊಂದಿದೆ. ಸಂಘದ ಲಾಭದ ದೊಡ್ಡ ಮೊತ್ತವನ್ನು ಉಚಿತ ಶಿಕ್ಷಣ ನೀಡುತ್ತಿರುವ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ ನೀಡಲು ತೀರ್ಮಾನಿಸಿದ್ದು ಈ ಬಾರಿ ಮೊತ್ತವನ್ನು ಕನ್ನಡ ಭವನ ನಿರ್ಮಿಸಲು ಮೀಸರಿಸಲಾಗುವುದು. ಮಿಜಾರು, ಪುತ್ತಿಗೆ ಹಾಗೂ ಆಳ್ವಾಸ್ ಆಸ್ಪತ್ರೆ ಕ್ಯಾಂಪಸ್ಗಳಲ್ಲಿ ಉಪಶಾಖೆಗಳನ್ನು ತೆರೆಯಲಾಗುವುದು ಎಂದರು.
ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಮೋಹನ್ ಪಡಿವಾಳ್ ನಿವ್ವಳ ಲಾಭ ಹಂಚಿಕೆಯ ವಿವರ ನೀಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಎಂ. ಶೆಟ್ಟಿ 2017-18ನೇ ಸಾಲಿನ ವಾರ್ಷಿಕ ವರದಿ ಮಂಡನೆ ಮತ್ತು ಮಂಜೂ ರಾತಿ ಪಡೆದರು. ನಿರ್ದೇಶಕ ರಾಮಚಂದ್ರ ಅವರು ಪರಿಶೋಧಿತ ಲೆಕ್ಕಪತ್ರಗಳು ಮತ್ತು ಲೆಕ್ಕ ಪರಿಶೋಧಕರ ವರದಿ ಮಂಡಿಸಿದರು. ನಿರ್ದೇಶಕ ಜಯರಾಮ ಕೋಟ್ಯಾನ್ ನೈಜ ಆಯವ್ಯಯದ ಪರಿಶೀಲನೆ ನಡೆಸಿದರು. ರಮೇಶ್ ಶೆಟ್ಟಿ 2018-19ನೇ ಸಾಲಿನ ಬಜೆಟ್ ಮಂಡಿಸಿದರು. ದೇವಿಪ್ರಸಾದ್ ಶೆಟ್ಟಿ ಲೆಕ್ಕಪರಿಶೋಧಕರ ನೇಮಕಾತಿಯ ವಿವರ ನೀಡಿದರು.
ಉಪಾಧ್ಯಕ್ಷ ಮೋಹನ ಪಡಿವಾಳ್ ನಿರ್ದೇಶಕರಾದ ಜಯಶ್ರೀ ಎ. ಶೆಟ್ಟಿ, ಜಯರಾಮ ಕೋಟ್ಯಾನ್ ದೇವಿಪ್ರಸಾದ್ ಶೆಟ್ಟಿ, ಪ್ರಕಾಶಿನಿ ಹೆಗ್ಡೆ, ರಾಮಚಂದ್ರ, ಮಹಮ್ಮದ್ ಶರೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರ್ವಹಿಸಿದರು.