ಉಡುಪಿ; ಬ್ಯಾಂಕ್ಗಳ ವಿಲೀನ ವಿರೋಧಿಸಿ ಧರಣಿ: ಮೋದಿ, ಜೆಟ್ಲಿ ವಿರುದ್ಧ ಆಕ್ರೋಶ
ಉಡುಪಿ, ಸೆ.18: ರಾಷ್ಟ್ರೀಯ ಬ್ಯಾಂಕ್ಗಳಾದ ಬ್ಯಾಂಕ್ ಆಫ್ ಬರೋಡ, ವಿಜಯಾ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ಗಳ ವಿಲೀನದ ಕುರಿತು ಕೇಂದ್ರ ಸರಕಾರ ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿ ಬ್ಯಾಂಕ್ ಸಂಘಟನೆಗಳ ಒಕ್ಕೂಟ ಉಡುಪಿ ಜಿಲ್ಲಾ ಘಟಕವು ಉಡುಪಿ ಕಿನ್ನಿಮುಲ್ಕಿಯಲ್ಲಿರುವ ದೇನಾ ಬ್ಯಾಂಕ್ ಉಡುಪಿ ಶಾಖೆಯ ಎದುರು ಧರಣಿ ನಡೆಸಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ರಾಮಮೋಹನ್, ಕೇಂದ್ರ ಸರಕಾರದ ಏಕಪಕ್ಷೀಯ ಈ ನಿರ್ಧಾರ ಖಂಡನೀಯ. ಈ ಹಿಂದೆ ಮಾಡಿರುವ ಸ್ಟೇಟ್ ಬ್ಯಾಂಕ್ನ ಸಹವರ್ತಿ ಬ್ಯಾಂಕ್ಗಳ ವಿಲೀನದಿಂದ ಏನು ಸಾಧಿಸಲಾಗಿಲ್ಲ. ಇದು ಸಾಬೀತಾದರೂ ಕೂಡ ಸರಕಾರ ಇದೀಗ ಮತ್ತೆ ಬ್ಯಾಂಕ್ಗಳ ವಿಲೀನಕ್ಕೆ ಮುಂದಾಗಿರುವುದು ದುರದೃಷ್ಟಕರ ಎಂದು ಟೀಕಿಸಿದರು.
ವಿಜಯ ಬ್ಯಾಂಕ್ ನೌಕರರ ಸಂಘದ ಪ್ರಾಂತೀಯ ಅಧ್ಯಕ್ಷ ಎಸ್.ಕರುಣಾಕರ ಶೆಟ್ಟಿ ಮಾತನಾಡಿ, ಬ್ಯಾಂಕ್ ವಿಲೀನ ಪ್ರತಿಯೊಬ್ಬರು ಪ್ರತಿಭಟನೆ ಮಾಡಬೇಕಾ ಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವ ಅರುಣ್ ಜೆಟ್ಲಿಗೆ ಛಿಮಾರಿ ಹಾಕಬೇಕು. ಈ ವಿಲೀನ ಆಘಾತದಿಂದ ಹಲವು ಮಂದಿ ನೊಂದು ಕೊಂಡು ಸಾಯುವ ಸ್ಥಿತಿ ಬರಬಹುದು. ಇದಕ್ಕೆಲ್ಲ ಮೋದಿ ಹೊಣೆಗಾರರಾಗು ತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯಾ ಬ್ಯಾಂಕ್ನ ಬಿ.ಕೆ.ಬಿಲ್ಲವ, ದೇನಾ ಬ್ಯಾಂಕ್ನ ಶ್ರೀಪತಿ ಭಟ್, ಕೃಷ್ಣ ಪ್ರಸಾದ್, ಕರ್ಣಾಟಕ ಬ್ಯಾಂಕಿನ ನಿತ್ಯಾನಂದ ಮಾತನಾಡಿದರು. ಅಖಿಲ ಭಾರತ ಬ್ಯಾಂಕ್ ಸಂಘಟನೆಗಳ ಒಕ್ಕೂಟ ಉಡುಪಿ ಜಿಲ್ಲಾ ಸಂಚಾಲಕ ಹೆರಾಲ್ಡ್ ಡಿಸೋಜ ಕಾರ್ಯಕ್ರಮ ಸಂಯೋಜಿಸಿದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ವರದ ರಾಜ, ಭಾರತೀಯ ಸ್ಟೇಟ್ ಬ್ಯಾಂಕಿನ ಪ್ರಕಾಶ್ ಜೋಗಿ, ಕಾರ್ಪೊರೇಶನ್ ಬ್ಯಾಂಕಿನ ರಘುರಾಮಕೃಷ್ಣ ಬಲ್ಲಾಳ್, ನಾಗೇಶ್ ನಾಯಕ್, ಅಧಿಕಾರಿಗಳ ಸಂಘಟನೆಯ ಜಯಪ್ರಕಾಶ್ ರಾವ್, ರವಿಶಂಕರ್, ಅನಂತಪದ್ಮನಾಭ, ನೌಕರರ ಸಂಘಟನೆಯ ರವೀಂದ್ರ, ರಮೇಶ್, ಜಯನ್ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.