ಸೆ. 24: ಆಳ್ವಾಸ್ನಲ್ಲಿ "ರತ್ನಾಕರವರ್ಣಿಯ ಭರತೇಶವೈಭವ" ವಿಚಾರ ಸಂಕಿರಣ
ಮೂಡುಬಿದಿರೆ, ಸೆ. 18: ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಮಂಗಳೂರು ವಿವಿ, ಮಂಗಳ ಗಂಗೋತ್ರಿ ಮತ್ತು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇದರ ಕನ್ನಡ ವಿಭಾಗದ ವತಿಯಿಂದ "ರತ್ನಾಕರವರ್ಣಿಯ ಭರತೇಶವೈಭವ" ಕುರಿತ ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣವು ಸೆ. 24ರಂದು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಲಿದೆ ಎಂದು ಮಂಗಳೂರು ವಿವಿಯ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠದ ಸಂಯೋಜಕ ಪ್ರೊ.ಸೋಮಣ್ಣ ಹೊಂಗಳ್ಳಿ ಮತ್ತು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 10.30ಕ್ಕೆ ಆರಂಭಗೊಳ್ಳುವ ವಿಚಾರ ಸಂಕಿರಣವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಉದ್ಘಾಟಿಸಲಿದ್ದಾರೆ. ಮಂಗಳೂರು ವಿವಿಯ ಕುಲ ಸಚಿವ ಪ್ರೊ.ಎ.ಎಂ.ಖಾನ್ ಅಧ್ಯಕ್ಷತೆಯನ್ನು ವಹಿಸಲಿದ್ದು, ಬೆಂಗಳೂರು ಖ್ಯಾತ ವಿಮರ್ಶಕ ಎಚ್.ದಂಡಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ ಡಾ.ಮಾಧವ ಪೆರಾಜೆ "ಭರತೇಶ ವೈಭವ ಮತ್ತು ಪೂರ್ವ ಪುರಾಣ", ಮದರಾಸು ವಿವಿಯ ಸಹಾಯಕ ಪ್ರಾಧ್ಯಾಪಕ ಡಾ.ಎಂ.ರಂಗಸ್ವಾಮಿ "ರತ್ನಾಕರವರ್ಣಿಯ ಭರತೇಶವೈಭವ : "ಚಿಂತೆಯೇ ಮುಪ್ಪು ಸಂತೋಷ ಜವ್ವನ", ಮೂಡುಬಿದಿರೆಯ ವಿದ್ವಾಂಸ ಮುನಿರಾಜ ರೆಂಜಾಳ ಅವರು "ಭರತೇಶ ವೈಭವದಲ್ಲಿ ಸಾಮಾಜಿಕ ಸಂದೇಶ", ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ನಾಗಾರ್ಜುನ ಎಚ್.ಎಂ ಅವರು "ಭರತೇಶ ವೈಭವ : ಜೈನ ತತ್ವದ ನಿಲುವು", ಕುವೆಂಪು ವಿವಿ ಕನ್ನಡ ಭಾರತಿಯ ಸಹ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಸಿದ್ದೇಶ ಅವರು "ಭರತೇಶ ವೈಭವ ಮತ್ತು ಆಧ್ಯಾತ್ಮಿಕತೆ" ಮತ್ತು ಬೆಂಗಳೂರು ಖ್ಯಾತ ವಿಮರ್ಶಕ ಭರತೇಶ ವೈಭವ ಮತ್ತು ಪ್ರಭುತ್ವದ ನೆಲೆಗಳು" ಎಂಬ ವಿಷಯದ ಕುರಿತು ವಿಚಾರಗೋಷ್ಠಿ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.