ಫಲ್ಗುಣಿ ನದಿಗೆ ಕೈಗಾರಿಕೆಗಳ ತ್ಯಾಜ್ಯ ನೀರು !
ಮಂಗಳೂರು, ಸೆ.19: ಮಳೆ ಕಡಿಮೆಯಾಗಿತ್ತಲೇ ಪಲ್ಗುಣಿಯ ನೀರಿನ ಮೂಲಗಳಲ್ಲೊಂದಾದ ತೋಕೂರು ಹಳ್ಳಕ್ಕೆ ಕೈಗಾರಿಕೆಗಳ ತ್ಯಾಜ್ಯ ನೀರನ್ನು ಹರಿದು ಬಿಡಲಾಗುತ್ತಿದೆ. ಕಳೆದ ಮೂರ್ನಾಲ್ಕು ದಿನದಿಂದ ಈ ತ್ಯಾಜ್ಯವನ್ನು ನದಿಗೆ ಬಿಡುವುದರಿಂದ ನದಿಯ ನೀರು ಪೂರ್ಣ ಸಂಪೂರ್ಣ ಕಪ್ಪಾಗಿದೆ.
ಪಲ್ಗುಣಿಯ ದಂಡೆಯಲ್ಲೇ ಅದಾನಿ, ರುಚಿಗೋಲ್ಡ್, ಮೀನು ಸಂಸ್ಕರಣಾ ಘಟಕ, ಯುಬಿ ಬಿಯರ್, ಎಂಆರ್ಪಿಎಲ್ನಂತಹ ಕೈಗಾರಿಕೆಗಳಿವೆ. ಆದರೆ, ಯಾವ ಕೈಗಾರಿಕಾ ಘಟಕಗಳಿಂದ ಕೊಳೆತ ನೀರನ್ನು ನದಿಗೆ ಹಳ್ಳದ ಮೂಲಕ ಹರಿದು ಬಿಡಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿಲ್ಲ. ನೀರು ಅಲ್ಲಲ್ಲಿ ಶೇಖರಣೆಗೊಂಡ ಕಾರಣ ಪರಿಸರವಿಡೀ ಗಬ್ಬೆದ್ದು ನಾರುತ್ತಿವೆ. ಇದರಿಂದ ತೋಕೂರಿನ ಕೃಷಿಕರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಬುಧವಾರ ತೋಕೂರು ಗ್ರಾಪಂ ಅಧ್ಯಕ್ಷೆ ಪ್ರೆಸಿಲ್ಲಾ ಡಿಸೋಜ, ಸದಸ್ಯರಾದ ಕೆವಿನ್ ಡಿಸೋಜ, ಅಬೂಬಕರ್ ಬಾವಾ, ಲಾನ್ಸಿ ಡಿಸೋಜ ಮತ್ತಿತರರು ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ತ್ಯಾಜ್ಯ ನೀರು ಹರಿಯಬಿಡುವುದನ್ನು ಕಂಪೆನಿಗಳು ನಿಲ್ಲಿಸದಿದ್ದರೆ ಹೋರಾಟ ಮಾಡಲು ಗ್ರಾಮಸ್ಥರು ಸಜ್ಜಾಗಿದ್ದಾರೆ.