ಭಟ್ಕಳದ ‘ಗುರುಕವಿ’ ಡಾ.ಫಿತ್ರತ್ ಭಟ್ಕಲಿ ನಿಧನ
ಭಟ್ಕಳ, ಸೆ. 19: ಇಲ್ಲಿನ ಉರ್ದು ಸಾಹಿತ್ಯದ ‘ಗುರು ಕವಿ’ ಎಂದೇ ಗುರುತಿಸಲ್ಪಟ್ಟಿದ್ದ ಸಾಹಿತಿ, ಕವಿ ಹಾಗೂ ಶಿಕ್ಷಕ ಡಾ.ಮುಹಮ್ಮದ್ ಹುಸೇನ್ ಫಿತ್ರತ್ (86) ಮಂಗಳವಾರ ರಾತ್ರಿ ಅಳ್ವಸ್ಟ್ರೀಟ್ ನ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಇವರು ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಭಟ್ಕಳ ನೆಲದಲ್ಲಿ ಉರ್ದು ಸಾಹಿತ್ಯ ವನ್ನು ಗಟ್ಟಿಗೊಳಿಸಿದ್ದ ಇವರು ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ಉರ್ದು ಶಿಕ್ಷಕರಾಗಿ ಸೇವೆಸಲ್ಲಿಸಿದ್ದರು. ಕರ್ನಾಟಕ ರಾಜ್ಯ ಉರ್ದು ಅಕಾಡೆಮಿಯ ಸದಸ್ಯರಾಗಿಯೂ ರಾಜ್ಯದ ಸಾಹಿತ್ಯ ಪ್ರೇಮಿಗಳಲ್ಲಿ ಗುರುತಿಸಿಕೊಂಡಿದ್ದ ಇವರಿಗೆ ಉರ್ದು ಅಕಾಡೆಮಿಯ ಸಾಹಿತ್ಯ ಪ್ರಶಸ್ತಿಗೂ ಬಾಜನರಾಗಿದ್ದು. ಇದುವರೆಗೆ 7 ಕವನ ಸಂಕಲನಗಳು ಹೊರಬಂದಿದ್ದು ಇವರ ಕವಿತೆ ಎಸ್.ಎಸ್.ಎಲ್.ಸಿ ಪಠ್ಯಕ್ರಮದಲ್ಲೂ ಆಯ್ಕೆಯಾಗಿತ್ತು.
ಇವರ ಬರವಣೆಗೆಯು ಶುದ್ಧತೆಯಿಂದ ಕೂಡಿದ್ದು ಪ್ರವಾದಿ ಮುಹಮ್ಮದ್ ಪೈಬಂಗರರ ಸ್ತುತಿ(ನಾತ್) ಸಾಹಿತ್ಯ ಪ್ರಕಾರದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಅಪಾರ ಶಿಷ್ಯವರ್ಗವನ್ನು ಹೊಂದಿದ್ದ ಇವರು ಸ್ಥಳೀಯವಾಗಿ ಹಲವಾರು ಬಾರಿ ಸನ್ಮಾನ ಗೌರವಗಳನ್ನು ಪಡೆದುಕೊಂಡಿದ್ದಾರೆ.
ಇವರ ನಿಧನಕ್ಕೆ ಅಂಜುಮನ್ ಶಿಕ್ಷಣ ಸಂಸ್ಥೆ, ತಂಝೀಮ್, ಇದಾರೆ ಅದಬೆ ಇಸ್ಲಾಮಿ ಹಿಂದ್, ಜಮಾಅತೆ ಇಸ್ಲಾಮಿ ಹಿಂದ್, ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವಾರು ಸಂಘಸಂಸ್ಥೆಗಳ ಪ್ರಮುಖರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.