ವಿದ್ಯಾರ್ಥಿಗಳಲ್ಲಿ ಶ್ರೇಷ್ಠತೆಗಾಗಿ ಉತ್ಸಾಹ ಅಗತ್ಯ: ವೀರಪ್ಪ ಮೊಯ್ಲಿ
ಮಂಗಳೂರು ವಿವಿ ಕಾಲೇಜು 150ನೆ ಸಂಸ್ಥಾಪನಾ ದಿನಾಚರಣೆ
ಮಂಗಳೂರು, ಸೆ.20: ವಿದ್ಯಾರ್ಥಿ ದೆಸೆಯಲ್ಲಿಯೇ ಶ್ರೇಷ್ಠತೆಗಾಗಿ ಉತ್ಸಾಹವನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ ಅಭಿಪ್ರಾಯಿಸಿದ್ದಾರೆ.
ಇಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ 150ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾಲೇಜು ವಿದ್ಯಾರ್ಥಿಗಳು ತಮ್ಮ ಕಲಿಕಾ ಜೀವನವನ್ನು ವಿಭಿನ್ನವಾಗಿಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ವಿಭಿನ್ನವಾದ ಶ್ರೇಷ್ಠತೆ ಇರುತ್ತದೆ. ಅದನ್ನು ಅರಿತುಕೊಂಡು ಪ್ರೋತ್ಸಾಹಿಸುವ ಕಾರ್ಯವನ್ನು ಅಧ್ಯಾಪಕ ವೃಂದ ಮಾಡಬೇಕು ಎಂದವರು ಹೇಳಿದರು.
ಉನ್ನತ ಶಿಕ್ಷಣದಲ್ಲಿ ಪ್ರವೇಶ, ಸಮತೋಲನ ಹಾಗೂ ಗುಣಮಟ್ಟ ಅತ್ಯಗತ್ಯ. ಇದನ್ನು ಶಿಕ್ಷಣ ಸಂಸ್ಥೆಗಳು ಒದಗಿಸಿದಾಗ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಮೊಯ್ಲಿ ಹೇಳಿದರು.
ಸಂಸ್ಥಾಪನಾ ಉಪನ್ಯಾಸ ನೀಡಿದ ಮಂಗಳೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ. ಎಂ.ಐ. ಸವದತ್ತಿ, ಅಧ್ಯಾಪಕರಲ್ಲಿಂದು ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.
ಓದುವ ಹವ್ಯಾಸ ಇಲ್ಲದೆ ಕಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಶಿಕ್ಷಣವೆಂದು ವಿಷಯ ಕಲಿಕೆಗೆ ಮಾತ್ರ ಸೀಮಿತವಾಗುತ್ತಿದೆಯೇ ಹೊರತು ವಿದ್ಯಾರ್ಥಿಗಳು ಮಾನವರಾಗುವುದನ್ನು ಕಲಿಸುವುದಿಲ್ಲ. ಶಿಕ್ಷಣದಲ್ಲಿ ವೌಲ್ಯ ಕುಸಿಯುತ್ತಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ನಾಯಕತ್ವವನ್ನು ಬೆಳೆಸಲಾಗುತ್ತಿಲ್ಲ ಎಂದು ಅವರು ಬೇಸರಿಸಿದರು.
ಶಿಕ್ಷಕ ವೃತ್ತಿ ನಿರಂತರ ಕಲಿಕೆಯ ವೃತ್ತಿ. ಉನ್ನತ ಶಿಕ್ಷಣದಲ್ಲಿ ಸಂಶೋಧನೆಗೆ ಒತ್ತು ನೀಡಲಾಗುತ್ತದೆ. ಪ್ರಬಂಧಗಳೂ ಪ್ರಕಟವಾಗುತ್ತವೆ. ಅದರ ಜತೆಯಲ್ಲೇ ಅಧ್ಯಾಪಕರು ಕಲಿಸುವುದರಲ್ಲಿ ಆಸಕ್ತಿಯನ್ನು ಹೊಂದಿರುವುದು ಅಗತ್ಯ. ಪದವಿ, ಸ್ನಾತಕೋತ್ತರ ಪದವೀಧರರನ್ನು ಸೃಷ್ಟಿಸುವ ಜತೆಗೆ ಸ್ಪರ್ಧಾತ್ಮಕ ವ್ಯಕ್ತಿಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಸಂಸ್ಥಾಪನಾ ಭಾಷಣ ಮಾಡಿದ ಪ್ರೊ.ಎಂ.ಐ.ಸವದತ್ತಿರನ್ನು ಈ ಸಂದರ್ಭ ಗೌರವಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಎ.ಎಂ.ಖಾನ್, ವಿವಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಿ, ಸಮಾರಂಭದಲ್ಲಿ ಹೂವಿನ ಬದಲು ಪುಸ್ತಕ ನೀಡಲು ನಿರ್ಣಯಿಸಲಾಗಿದೆ ಎಂದರು.
ಕಾಲೇಜಿನ 150ನೇ ವರ್ಷದ ಅಂಗವಾಗಿ 150 ವಿವಿಧ ಸಸಿಗಳ ನೆಡುವಿಕೆ, 150 ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮಿಕೊಳ್ಳುವುದು, ವಿಶೇಷ ಉಪನ್ಯಾಸ- ವಿಚಾರ ಸಂಕಿರಣ, ಗ್ರಂಥಾಲಯಕ್ಕೆ 150 ಪುಸ್ತಕಗಳ ಸೇರ್ಪಡೆ, 150 ಹಳೆ ವಿದ್ಯಾರ್ಥಿಗಳಿಗೆ ಗೌರವ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ನೈರುತ್ಯ ಶಿಕ್ಷಕ ಕ್ಷೇತ್ರದ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಮೇಯರ್ ಭಾಸ್ಕರ ಕೆ., ಪಾಲಿಕೆ ಸದಸ್ಯ ಎ.ಸಿ.ವಿನಯರಾಜ್, ನಿವೃತ್ತ ಪ್ರಾಂಶುಪಾಲ ನಾರಾಯಣ ನಾಯರ್ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ (ಪ್ರಭಾರ) ಪ್ರೊ.ಕಿಶೋರ್ ಕುಮಾರ್ ಸಿ.ಕೆ. ಅಧ್ಯಕ್ಷತೆ ವಹಿಸಿದ್ದರು.
ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಉದಯ ಕುಮಾರ್ ಎಂ.ಎ. ಸ್ವಾಗತಿಸಿದರು.