ಅಕ್ಟೋಬರ್ನಿಂದ ಆಂದೋಲನ ಮಾದರಿಯಲ್ಲಿ ದಾಖಲೆ ಸಂಗ್ರಹ: ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್
ನಗರಾಸ್ತಿ ಮಾಲಕತ್ವದ ದಾಖಲೆ ನೋಂದಾವಣೆ
ಮಂಗಳೂರು, ಸೆ.20: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 32 ಕಂದಾಯ ಗ್ರಾಮಗಳ ನಗರಾಸ್ತಿ ಮಾಲಕತ್ವದ ದಾಖಲೆ (ಯುಪಿಒಆರ್- ಪಿಆರ್ ಕಾರ್ಡ್) ಸಂಗ್ರಹ ಕಾರ್ಯ ಅಕ್ಟೋಬರ್ನಿಂದ ಆಂದೋಲನ ಮಾದರಿಯಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಅವರು, ಜನವರಿ 1ರಿಂದ ಕನಿಷ್ಠ 2 ಗ್ರಾಮಗಳಲ್ಲಿ ಆಸ್ತಿಗಳ ಮಾರಾಟ- ಖರೀದಿಗೆ ಈ ಕಾರ್ಡ್ ಕಡ್ಡಾಯಗೊಳಿಸಲಾಗುವುದು ಎಂದು ಅವರು ಹೇಳಿದರು.
ಪಾಲಿಕೆಯ 32 ಕಂದಾಯ ಗ್ರಾಮಗಳನ್ನು 6 ವಲಯಗಳಾಗಿ ಮತುತ 30 ಸೆಕ್ಟರ್ಗಳಾಗಿ ವಿಂಗಡಿಸಿ ಈಗಾಗಲೇ 1,50,428 ಆಸ್ತಿಗಳ ಸ್ಯಾಟಲೈಟ್ ಸರ್ವೆ ಕಾರ್ಯ ನಡೆಸಲಾಗಿದೆ. ಈ ಆಸ್ತಿಗಳಲ್ಲಿ ಈಗಾಗಲೇ 76608 ಆಸ್ತಿಗಳ ದಾಖಲೆಗಳನ್ನು ಸಂಗ್ರಹಿಸಲಾಗಿದೆ. 31174 ಆಸ್ತಿಗಳ ಕರಡು ಪಿಆರ್ ಕಾರ್ಡ್ಗಳನ್ನು ತಯಾರಿಸಲಾಗಿದೆ. 25618 ಆಸ್ತಿಗಳ ಕರಡು ಪಿಆರ್ ಕಾರ್ಡ್ ವಿತರಿಸಲಾಗಿದೆ. 23221 ಅಂತಿಮವಾಗಿ ಪಿಆರ್ ಕಾರ್ಡ್ಗಳ ಅನುಮೋದನೆಗೊಂಡು, 17943 ಆಸ್ತಿಗಳ ಅಂತಿಮ ಪಿಆರ್ ಕಾರ್ಡ್ಗಳನ್ನು ಮಾಲಕರಿಗೆ ವಿತರಿಸಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಇದುವರೆಗೆ ಸಂಗ್ರಹಿಸಲಾದ 76608 ಆಸ್ತಿಗಳಿಗೆ ಸಂಬಂಧಿಸಿದ ಎಲ್ಲಾ ದಸ್ತಾವೇಜು/ ದಾಖಲೆಗಳನ್ನು ಯುಪಿಓಆರ್ ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ ಸಂಗ್ರಹಿಸಿ ದಾಟಾ ಎಂಟ್ರಿ ಕಾರ್ಯ ಪ್ರಗತಿಯಲ್ಲಿದೆ. ಡಾಟಾ ಎಂಟ್ರಿ ಮಾಡಿದ ದಾಖಲೆಗಳಿಗೆ ಯುಪಿಓಆರ್ ತಂತ್ರಾಂಶದ ಮೂಲಕ ಹಕ್ಕು ವಿಚಾರಣಾ ಪ್ರಕ್ರಿಯೆ ನಡೆದು ಕರ್ನಾಟಕ ಭೂಕಂದಾಯ, ನಿಯಮ 1996ರ ನಿಯಮ 83 (1) ಹಾಗೂ ನಿಯಮ 84(4)ರ ಪ್ರಕಾರ ಕರಡು ಪಿಆರ್ ಕಾರ್ಡ್ ತಯಾರಿಸಿ ಸಂಬಂಧಪಟ್ಟ ಆಸ್ತಿ ಮಾಲಕರಿಗೆ ನೀಡಲಾಗುತ್ತದೆ. ಕರಡು ಪಿಆರ್ ಕಾರ್ಡ್ ತಯಾರಿಸಿ ಆಸ್ತಿದಾರರಿಗೆ ಜಾರಿಯಾದ ದಿನಾಂಕದಿಂದ 30 ದಿನಗಳ ಅವಧಿಯ ಒಳಗೆ ಆಕ್ಷೇಪಣೆ ಸಲ್ಲಸಲು ನಿಯಮಾನುಸಾರ ಅವಕಾಶವಿರುತ್ತದೆ. ಕರಡು ಪಿಆರ್ ಕಾರ್ಡ್ ಪ್ರಮಾಣ ಪತ್ರಗಳ ಮೇಲೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ಅಂಚೆ ಅಥವಾ ಕಚೇರಿಯ ಅವಧಿಯಲ್ಲೂ ಸಲ್ಲಿಸಬಹುದು. ಆಕ್ಷೇಪಣೆ ವಿಚಾರಣೆ ಬಳಿಕ ಪ್ರಕ್ರಿಯೆ ಪೂರ್ಣಗೊಳಿಸಿ ಅಂತಿಮ ಪಿ.ಆರ್. ಕಾರ್ಡ್ ಪ್ರಮಾಣ ಪತ್ರ ವಿತರಿಸಲಾಗುವುದು.
ಆಸ್ತಿಯ ಮಾಲಕತ್ವದಲ್ಲಿ ಯಾವುದಾದರೂ ಬದಲಾವಣೆಗಳಿದ್ದಲ್ಲಿ, ಬದಲಾದ ಮಾಲಕರ ವಿವರದೊಂದಿಗೆ ಹಾಗೂ ಅಗತ್ಯ ದಸ್ತಾವೇಜು/ ದಾಖಲೆಗಳೊಂದಿಗೆ, ಯುಪಿಓಆರ್ ಪ್ರಾಧಿಕಾರದ ಗಮನಕ್ಕೆ ತರುವುದು. ಒಂದು ವೇಳೆ ಆಸ್ತಿದಾರರು ಆಸ್ತಿಯ ಮೇಲೆ ಬ್ಯಾಂಕ್ನಿಂದ ಅಥವಾ ಇತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಲ್ಲಿ ಅಥವಾ ಬೋಗ್ಯಕ್ಕೆ ಒಳಪಡಿಸಿದ್ದಲ್ಲಿ ಅಥವಾ ಸಾಲ ತೀರಿಸಿದ ಮಾಹಿತಿಯನ್ನು ಪಿಆರ್ ಕಾರ್ಡ್ ಪ್ರಮಾಣಪತ್ರದಲ್ಲಿ ಕಾಲೋಚಿತಗೊಳಿಸುವುದಕ್ಕೋಸ್ಕರ ಯುಪಿಓಆರ್ ಕಚೇರಿಯನ್ನು ಸಂಪರ್ಕಿಸುವುದು. ವಿಚಾರಣಾಧಿಕಾರಿ ಆಸ್ತಿಯ ಮಾಲಕತ್ವದ ಹಕ್ಕುಗಳಿಗೆ ಸಂಬಂಧಿಸಿದಂತೆ ವಿಚಾರಣೆಯನ್ನು ಅಂತಿಮಗೊಳಿಸಿದ ನಂತರದಲ್ಲಿ ದೃಢೀಕರಣಕ್ಕಾಗಿ ಬೆರಳಚ್ಚುಗಳನ್ನು ನೋಂದಾಯಿಸಲು ಯುಪಿಓಆರ್ ಕಚೇರಿಗೆ ಹಾಜರಾಗಿ ಯಾವುದಾದರೂ ಒಂದು (ಆಧಾರ್ ಕಾರ್ಡ್/ ಪಾನ್ ಕಾರ್ಡ್ ಅಥವಾ ಸರಕಾರದಿಂದ ವಿತರಿಸಿದ ಗುರುತಿನ ಚೀಟಿ) ದಾಖಲೆಯಾಗಿ ನೀಡುವುದು ಕಡ್ಡಾಯವಾಗಿರುತ್ತದೆ.
ನಿಗದಿಪಡಿಸಿದ ಶುಲ್ಕವನ್ನು ಯುಪಿಓಆರ್ ತಂತ್ರಾಂಶದಲ್ಲಿಯೇ ಪಾವತಿ ಮಾಡುವ ಮೂಲಕ ಅಂತಿಮ ಪಿಆರ್ ಕಾರ್ಡ್ ಪ್ರಮಾಣ ಪತ್ರವನ್ನು ಪಡೆಯಬಹುದು. ಪಿಆರ್ ಕಾರ್ಡ್ ಪ್ರಮಾಣಪತ್ರವು ಅಂತಿಮಗೊಂಡ ನಂತರ ಯಪಿಓಆರ್ ತಂತ್ರಾಂಶವು ಕಾವೇರಿ ತಂತ್ರಾಂಶದೊಂದಿಗೆ ಸಂಯೋಜನೆಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಆಸ್ತಿಗಳ ವ್ಯವಹಾರಕ್ಕೆ ಪಿಆರ್ ಕಾರ್ಡ್ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ಒದಗಿಸಿದರು.
ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಭೂ ಮಾಪನ ಮತ್ತು ದಾಖಲೆಗಳ ಜಿಲ್ಲಾ ಉಪನಿರ್ದೇಶ ಕುಸುಮಾಧರ ಉಪಸ್ಥಿತರಿದ್ದರು.
ಯುಪಿಒಆರ್ ಕಾರ್ಡ್ ಅಧಿಕೃತ ದಾಖಲೆ
ಆಸ್ತಿಗಳ ವ್ಯವಹಾರಕ್ಕೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ಯುಪಿಒಆರ್ ಕಾರ್ಡ್ ಕಡ್ಡಾಯ ಮಾತ್ರವಲ್ಲದೆ ಅಧಿಕೃತ ದಾಖಲೆಯಾಗಿರುತ್ತದೆ. ಆರ್ಟಿಸಿ, ಕಣ್ಣಳತೆಯ ನಕ್ಷೆಗಳನ್ನು ವಿರೂಪಗೊಳಿಸಲು ಸಾಧ್ಯವಿರುತ್ತದೆ. ಆದರೆ, ಜಿಪಿಎಸ್ ಆಧಾರಿತ ವ್ಯವಸ್ಥೆಯ ಯುಪಿಒಆರ್ ಕಾರ್ಡ್ ಆಸ್ತಿಯ ಸಂಪೂರ್ಣ ಹಾಗೂ ಸಮಗ್ರ ಮಾಹಿತಿಯನ್ನು ಒಳಗೊಂಡ ದಾಖಲೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಿಂದ ಕಣ್ಣಳತೆಯ ಸರ್ವೆ ನಕ್ಷೆ ನೀಡುವುದನ್ನು ನಿಲ್ಲಿಸಲಾಗಿದೆ. ಪ್ರಸ್ತುತ ಅಧಿಕೃತ ದಾಖಲೆ ಮೇಲೆಯೇ ನಕ್ಷೆಯನ್ನು ಒದಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.
ಆಸ್ತಿ ದಾಖಲೆ ಒದಗಿಸಲು 3 ತಿಂಗಳ ಕಾಲಾವಕಾಶ
ಆಸ್ತಿಯ ನಕ್ಷೆಗಾಗಿ ಸರ್ವೆ ಇಲಾಖೆಗೆ ಅಲೆದಾಡುವ ತಾಪತ್ರಯವೂ ಇರುವುದಿಲ್ಲ. ಈಗಾಗಲೇ ಪಾಲಿಕೆಯ 32 ಗ್ರಾಮಗಳ ಶೇ. 50ರಷ್ಟು ಯುಪಿಓಆರ್ ವ್ಯವಸ್ಥೆಗೆ ಒಳಗಾಗಿದೆ. ಇನ್ನೂ 80,000ದಷ್ಟು ಆಸ್ತಿ ಮಾಲಕರು ಯುಪಿಓಆರ್ ಕಾರ್ಡ್ ಪಡೆಯಬೇಕಾಗಿದ್ದು, ಅಕ್ಟೋಬರ್ನಿಂದ ಆಂದೋಲನ ರೀತಿಯಲ್ಲಿ ಈ ಕಾರ್ಯ ನಡೆಯಲಿದೆ. ವೆಬ್ಸೈಟ್ನಲ್ಲೂ ಮಾಹಿತಿಯನ್ನು ಒದಗಿಸಲಾಗುವುದು. ಈ ಮೂಲಕ ಆಸ್ತಿ ಮಾಲಕರಿಗೆ ತಮ್ಮ ಆಸ್ತಿಗಳ ದಾಖಲೆಗಳನ್ನು ಒದಗಿಸಿ ಪ್ರಕ್ರಿಯೆಗಳನ್ನು ಪೂರೈಸಲು ಸಮಯ ನಿಗದಿ ಪಡಿಸಲು ಅವಕಾಶ ದೊರೆಯಲಿದೆ. ಅಪಾರ್ಟ್ಮೆಂಟ್ಗಳಿಗೂ ಯುಪಿಓಆರ್ ಕಾರ್ಡ್ ದೊರೆಯಲಿದೆ. ಈ ಕಾರ್ಯಕ್ಕಾಗಿ ಈಗಾಗಲೇ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜನರ ಆಸ್ತಿಗಳಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ಈ ಕಾರ್ಡ್ ಪರಿಹಾರವನ್ನು ಒದಗಿಸಲಿದೆ. ಆಸ್ತಿ ಮಾಲಕರು ಯುಪಿಓಆರ್ ಕಾರ್ಡ್ಗಳನ್ನು ಪಡೆಯಲು ಜನವರಿಯೊಳಗೆ ದಾಖಲೆಗಳನ್ನು ಒದಗಿಸಬೇಕು. ಮೂರು ತಿಂಗಳ ಕಾಲಾವಕಾಶ ಇರುವುದರಿಂದ ಜನರು ಸಾವಕಾಶದಿಂದ ಈ ಮಾಹಿತಿಯನ್ನು ಇಲಾಖೆಗೆ ಒದಗಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಶಿರಾಡಿಯಲ್ಲಿ ಸದ್ಯ ಲಘು ವಾಹನಗಳಿಗೆ ಮಾತ್ರ ಅವಕಾಶ
ಶಿರಾಡಿಯಲ್ಲಿ ಸದ್ಯ ಇನ್ನೂ ಎರಡು ವಾರಗಳ ಕಾಲ ಲಘು ವಾಹನಗಳ ಸಂಚಾರಕ್ಕೆ ಮಾತ್ರವೇ ಅವಕಾಶ ಮುಂದುವರಿಯುವುದು. ರಾಷ್ಟ್ರೀಯ ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಕಾಮಗಾರಿ ಮುಂದುವರಿಯುತ್ತಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಸದ್ಯ ಸಾರ್ವಜನಿಕ ವಾಹನಗಳಿಗೆ ಸಂಚಾರ ಅವಕಾಶ ನೀಡಲಾಗದು. ಎರಡು ವಾರಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.